ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕವಿತಾಳ ಸಮೀಪದ ಕೆ. ತಿಮ್ಮಾಪುರ ಗ್ರಾಮದಲ್ಲಿ ವಿಷಾಹಾರ ಸೇವನೆಯ ಶಂಕೆಯಿಂದ ಹಾಗೂ ಇಬ್ಬರು ಮಕ್ಕಳು ಮೃತಪಟ್ಟು, ಮೂವರು ಗಂಭೀರವಾಗಿ ಅಸ್ವಸ್ಥರಾದ ಹೃದಯವಿದ್ರಾವಕ ಘಟನೆ ಜುಲೈ 21ರಂದು ತಡರಾತ್ರಿ ನಡೆದಿದೆ.

ಮೃತರನ್ನು ರಮೇಶ್ (36), ಅವರ ಮಗಳು ನಾಗಮ್ಮ (8) ಮತ್ತು ದೀಪಾ (6) ಎಂದು ಗುರುತಿಸಲಾಗಿದೆ. ಈ ದುರಂತದಲ್ಲಿ ತಾಯಿ ಪದ್ಮಾ, ಮಗ ಕೃಷ್ಣ ಹಾಗೂ ಮಗಳು ಚೈತ್ರಾ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣವೇ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೂಲ ವರದಿಗಳ ಪ್ರಕಾರ, ಸೋಮವಾರ ರಾತ್ರಿ ಕುಟುಂಬದ ಸದಸ್ಯರು ಊಟ ಮುಗಿಸಿ ಮಲಗಿದ್ದ ನಂತರ ಮಧ್ಯರಾತ್ರಿಯಿಂದಲೇ ಹೊಟ್ಟೆನೋವು, ವಾಂತಿ, ಭಾರೀ ಅಸ್ವಸ್ಥತೆ ಅನುಭವಿಸುತ್ತಿದ್ದರು. ಬೆಳಗ್ಗೆ 3 ಗಂಟೆ ಸುಮಾರಿಗೆ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ.

ವಿಷಾಹಾರ ಸೇವನೆಯ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪೂರ್ಣ ವೈದ್ಯಕೀಯ ವರದಿ ಇನ್ನೂ ಲಭ್ಯವಾಗಿಲ್ಲ. ಘಟನೆ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Related News

error: Content is protected !!