ಚಿಕ್ಕಬಳ್ಳಾಪುರ, ಮೇ 30: ತಿಪ್ಪೇನಹಳ್ಳಿಯ ಸಮೀಪದಲ್ಲಿರುವ ಮಕ್ಕಳ ಆಸರೆ ಬಾಲಮಂದಿರದಿಂದ ನಾಪತ್ತೆಯಾಗಿದ್ದ ಐದು ಬಾಲಕಿಯರು ಇದೀಗ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ವಾರ್ಡನ್ ಕಿರುಕುಳದಿಂದ ತೊಂದರೆಗೆ ಒಳಗಾದ ಕಾರಣವಾಗಿ ಅವರು ವಸತಿ ನಿಲಯದಿಂದ ಹೊರಡಿದ್ದಾಗಿ ಬಾಲಕಿಯರು ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಅವರು, “ವಾರ್ಡನ್ ಶ್ವೇತಾ ನಮಗೆ ನಿರಂತರವಾಗಿ ಬುದ್ಧಿವಾದ ಹೇಳುತ್ತಿದ್ದರು, ಕೆಲವೊಮ್ಮೆ ಹೊಡೆದು, ರೂಮಿನಲ್ಲಿ ಕೂಡಿ ಹಾಕಿ ಬೆದರಿಸುತ್ತಿದ್ದರು. ನಾವು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದೆವು. ಹಾಸ್ಟೆಲ್‌ನಲ್ಲಿ ಇಳಿದುಕೊಳ್ಳಲು ಇಚ್ಛೆಯಾಗದೆ ಸಂಬಂಧಿಕರ ಮನೆಗೆ ಹೋಗಲು ನಿರ್ಧರಿಸಿದ್ದೆವು,” ಎಂದು ಹೇಳಿದ್ದಾರೆ.

ಪತ್ತೆಯಾಗಿದ್ಮೇಲೆ ಬಾಲಕಿಯರು ತಮ್ಮ ಪೋಷಕರು ಅಥವಾ ಸಂಬಂಧಿಕರ ಬಳಿ ಕಳುಹಿಸಬೇಕೆಂದು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟ್ ನಡೆಸುವ ಈ ವಸತಿ ನಿಲಯದಲ್ಲಿ ಅನಾಥರು ಮತ್ತು ಏಕಪೋಷಕ ಮಕ್ಕಳಿಗೆ ಆಶ್ರಯ ನೀಡಲಾಗುತ್ತದೆ. ಬಾಲಕಿಯರು ನಾಪತ್ತೆಯಾಗುತ್ತಿದ್ದಂತೆ, ವಸತಿ ನಿಲಯದ ಆಡಳಿತದವರು ತಕ್ಷಣವೇ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಶೋಧ ಕಾರ್ಯ ಕೈಗೊಂಡು, ಬಾಲಕಿಯರನ್ನು ಪತ್ತೆ ಹಚ್ಚಿದ್ದಾರೆ.

ಈ ಘಟನೆಯಿಂದಾಗಿ ಬಾಲಮಂದಿರದ ನಿರ್ವಹಣಾ ರೀತಿಯ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮುಂದಿನ ಕ್ರಮಕ್ಕಾಗಿ ವಿಚಾರಣೆ ಆರಂಭಿಸಿದ್ದಾರೆ.

Related News

error: Content is protected !!