
ಬೆಳಗಾವಿ: ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತ 33 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಅನಗೋಳದ ದುರ್ಗಾ ಕಾಲೋನಿಯಲ್ಲಿ ವರದಿಯಾಗಿದೆ.
ಮೃತನನ್ನು ಶ್ರೀರಾಮ ಕಾಲೋನಿಯ ನಿವಾಸಿ ಸುನಿಲ್ ಮೂಲಿಮನಿ ಎಂದು ಗುರುತಿಸಲಾಗಿದೆ. ನಾಲ್ಕು ವರ್ಷಗಳ ಹಿಂದೆ ಪೂಜಾ ಎಂಬುವವರನ್ನು ವಿವಾಹವಾಗಿದ್ದ ಸುನಿಲ್, ಮದುವೆಯ ನಂತರ ನಾನಾ ಗಲಾಟೆಗಳಿಗೆ ಒಳಗಾಗಿದ್ದ. ದಂಪತಿಗೆ ಮೂರೂವರ್ಷದ ಪುತ್ರಿಯೂ ಇದ್ದಾಳೆ.
ಕೌಟುಂಬಿಕ ಕಲಹ ಹೆಚ್ಚಾದ ಕಾರಣ, ಪತ್ನಿ ಮತ್ತು ಮಗಳೊಂದಿಗೆ ಪ್ರತ್ಯೇಕ ವಾಸವಿದ್ದು, ಶಿವಶಕ್ತಿ ನಗರದಲ್ಲಿ ಬಾಡಿಗೆ ಅಂಗಡಿಯಲ್ಲಿ ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ನಡೆದುಕೊಂಡು ಬಂದ ಜಗಳಗಳು ಉದ್ಯಮ ಸ್ಥಳಕ್ಕೂ ವಿಸ್ತರಿಸುತ್ತಿದ್ದ ಕಾರಣ, ಸುನಿಲ್ ಮಾನಸಿಕವಾಗಿ ಖಿನ್ನರಾಗಿದ್ದ ಎಂಬುದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ, ಅಂಗಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗಿಂತ ಮೊದಲು ಬರೆದ ಡೆತ್ ನೋಟ್ನಲ್ಲಿ ಪತ್ನಿ ಪೂಜಾ ಅವರಿಂದ ಜೀವನ ದುಃಖಮಯವಾಗಿದೆ ಎಂದು ಹೇಳಿದ್ದು, ತಮ್ಮ ಮರಣಕ್ಕೆ ಪತ್ನಿಯೇ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳಕ್ಕೆ ಉದ್ಯಮಭಾಗ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೂಜಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.