ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು ಗ್ರಾಮದ ಬಳಿ ಸಂಭವಿಸಿದೆ. ಈ ಘಟನೆ ವಿಟ್ಟೋಸ್ ಬಾರ್ ಸಮೀಪ, ಎಸ್‌ಎಚ್-9 ಹೆದ್ದಾರಿಯ ಬಳಿ ನಡೆದಿದೆ.

ಕುಟುಂಬದ ಮಾಹಿತಿ ಪ್ರಕಾರ, ಚಂದನದೂರು ಗ್ರಾಮದ ಬಳಿ ಸಂಬಂಧಿಕರಿಗೆ ಅಪಘಾತ ಸಂಭವಿಸಿದೆ ಎಂಬ ಸುದ್ದಿ ತಿಳಿದ ಉಮಾದೇವಿ ಅವರು ತಮ್ಮ ಪುತ್ರ ಸಂಜಯ್ (21) ಜೊತೆ ದ್ವಿಚಕ್ರ ವಾಹನದಲ್ಲಿ ಅವರನ್ನು ನೋಡಲು ತೆರಳುತ್ತಿದ್ದರು. ಈ ವೇಳೆ ಸಂಜಯ್ ಚಾಲನೆ ಮಾಡುತ್ತಿದ್ದ ವಾಹನಕ್ಕೆ ಪಕ್ಕದಲ್ಲೇ ಸಾಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನ ಸವಾರ ಯಾವುದೇ ಸೂಚನೆ ನೀಡದೇ ಏಕಾಏಕಿ ಎಡಕ್ಕೆ ತಿರುಗಿದ ಪರಿಣಾಮ ಡಿಕ್ಕಿ ಸಂಭವಿಸಿದೆ.

ಡಿಕ್ಕಿಯ ತೀವ್ರತೆಗೆ ಇಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಉಮಾದೇವಿ ಅವರಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ದೇಹದ ಹಲವೆಡೆ ಗಾಯಗಳಾಗಿದ್ದವು. ಸಂಜಯ್ ಅವರಿಗೆ ಕೈ ಮತ್ತು ಕಾಲುಗಳಲ್ಲಿ ಗಾಯಗಳಾಗಿವೆ.

ಆಂಬುಲೆನ್ಸ್ ತಡವಾದ ಕಾರಣ ಸ್ಥಳೀಯರು ಗಾಯಾಳುಗಳನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಮಧ್ಯದಲ್ಲೇ ಆಂಬುಲೆನ್ಸ್ ಸಿಕ್ಕಿದ ಹಿನ್ನೆಲೆಯಲ್ಲಿ ಅವರನ್ನು ಅದರಲ್ಲಿ ಸ್ಥಳಾಂತರಿಸಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಪರಿಶೀಲಿಸಿದಾಗ ಉಮಾದೇವಿ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಸಂಜಯ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಈ ಅಪಘಾತಕ್ಕೆ ಕಾರಣವಾದ ಇನ್ನೊಂದು ದ್ವಿಚಕ್ರ ವಾಹನ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ವರದಿ: ಅವಿನಾಶ್

Related News

error: Content is protected !!