ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಕೆಕೆಆರ್ಟಿಸಿ ಬಸ್ ಅಪಘಾತಕ್ಕೀಡಾದರೂ, ದೊಡ್ಡ ಅನಾಹುತವನ್ನು ಚಾಲಕನ ಸಮಯಪ್ರಜ್ಞೆ ತಪ್ಪಿಸಿದೆ.
ಪಟ್ಟಣದಿಂದ ರಾಯಚೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಒಟ್ಟು 16 ಮಂದಿ ಪ್ರಯಾಣಿಕರಿದ್ದರು. ಪ್ರಯಾಣದ ವೇಳೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿನತ್ತ ಸಾಗುತ್ತಿದ್ದಾಗ, ಚಾಲಕ ಶಂಕರಲಿಂಗ ಅವರು ತಕ್ಷಣದ ನಿರ್ಧಾರ ತೆಗೆದುಕೊಂಡು ಬಸ್ ಅನ್ನು ಮರಕ್ಕೆ ಡಿಕ್ಕಿ ಹೊಡೆಸಿದರು. ಇದರಿಂದ ಬಸ್ ಮಗುಚಿ ಬೀಳುವ ಅಪಾಯ ತಪ್ಪಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಚಾಲಕ ಶಂಕರಲಿಂಗ ಹಾಗೂ ನಿರ್ವಾಹಕ ಹನುಮಂತಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ನಂತರ ಎಲ್ಲ ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಗಮ್ಯಸ್ಥಾನಕ್ಕೆ ಕಳುಹಿಸಲಾಗಿದೆ ಎಂದು ಡಿಪೋ ಅಧಿಕಾರಿ ಕೆ. ಸಂತೋಷ್ ಕುಮಾರ್ ತಿಳಿಸಿದ್ದಾರೆ.
