ಧರ್ಮಸ್ಥಳ ಸಬ್‌ ಇನ್ಸ್‌ಪೆಕ್ಟರ್‌ ಕಿಶೋರ್‌ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆ ಆರೋಪದ ಮೇಲೆ ಎಫ್‌ಐಆರ್‌ ದಾಖಲಾಗಿದೆ. ತಮ್ಮ ವರ್ಗಾವಣೆಗೆ ಪತ್ನಿಯ ಪೋಷಕರಿಂದ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದನ್ನೂ, ಹಣ ನೀಡದ ಹಿನ್ನೆಲೆಯಲ್ಲಿ ಪತ್ನಿಗೆ ಮಾನಸಿಕ ಮತ್ತು ಶಾರೀರಿಕ ಹಿಂಸೆಗೆ ಒಳಪಡಿಸಿದ್ದನ್ನೂ ಆರೋಪಿಸಲಾಗಿದೆ.

ಮದುವೆಯಿಂದಲೇ ಕಿರುಕುಳ

2024ರಲ್ಲಿ ಮೂಡಿಗೆರೆ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದ ಕಿಶೋರ್‌, ವರ್ಷಳನ್ನು ವಿವಾಹವಾಗಿದ್ದರು. ಮದುವೆಯ ವೇಳೆ ವರ್ಷಳ ಪೋಷಕರು 10 ಲಕ್ಷ ನಗದು, 22 ಲಕ್ಷ ರೂಪಾಯಿ ಮೌಲ್ಯದ ಕ್ರೇಟಾ ಕಾರು, 135 ಗ್ರಾಂ ಚಿನ್ನ ಒದಗಿಸಿದ್ದರು. ಹಾಗೆಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿ ಮದುವೆ ನಡೆಸಿದ್ದರು. ಮದುವೆಯ ಬಳಿಕವೂ ವರ್ಷಳಿಗೆ ನಿರಂತರವಾಗಿ ವರದಕ್ಷಿಣೆ ಸಂಬಂಧ ಕಿರುಕುಳ ಮುಂದುವರಿದಿತ್ತು.

ವರ್ಗಾವಣೆಗೆ ಹಣ ಬೇಡಿಕೆ

ಮೂಡಿಗೆರೆಯಿಂದ ವರ್ಗಾವಣೆ ಪಡೆಯಲು ವರ್ಷಳ ಪೋಷಕರಿಂದ 10 ಲಕ್ಷ ರೂಪಾಯಿ ತರುವಂತೆ ಕಿಶೋರ್‌ ಒತ್ತಾಯಿಸಿದ್ದ. ಹಣ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಕುಟುಂಬದವರ ಸಹಯೋಗದೊಂದಿಗೆ ಹಲ್ಲೆ ನಡೆಸಿರುವುದಾಗಿ ವರ್ಷ ಪೊಲೀಸ್‌ ದೂರು ದಾಖಲಿಸಿದ್ದಾರೆ.

ಗಂಭೀರ ಹಲ್ಲೆ, ಆಸ್ಪತ್ರೆಗೆ ದಾಖಲು

ಹಲ್ಲೆ ಹಿನ್ನಲೆಯಲ್ಲಿ ಗಂಭೀರ ಗಾಯಗೊಂಡ ವರ್ಷಳನ್ನು ಮೊದಲು ಧರ್ಮಸ್ಥಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಘಟನೆಯ ಬಗ್ಗೆ ವರ್ಷ ಚಂದ್ರಲೇಔಟ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಕಿಶೋರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಪ್ರಕರಣ ಇದೀಗ ಸುದ್ದಿಯ ಕೇಂದ್ರ ಬಿಂದುವಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Related News

error: Content is protected !!