
ರಾಯಚೂರಿನ ಸಿಂಧನೂರಿನಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪದ ಮಧ್ಯೆ ಆಕ್ರೋಶಗೊಂಡ ಕುಟುಂಬಸ್ಥರು ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ಗೆ ಹಾನಿ ಮಾಡಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಸಿದ್ದಮ್ಮ (23) ಎಂಬ ಯುವತಿ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಶನಿವಾರ ರಾತ್ರಿ ಸಿಂಧನೂರಿನ ಶರಣಬಸವೇಶ್ವರ ಖಾಸಗಿ ಹೆರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯೆ ಡಾ. ಸೌಮ್ಯಾ ಗುಂಡಳ್ಳಿ ಚಿಕಿತ್ಸೆ ನೀಡಿದ ನಂತರ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ಹೆರಿಗೆ ಬಳಿಕ ಸಿದ್ದಮ್ಮನ ಆರೋಗ್ಯ ಸಮರ್ಪಕವಾಗಿತ್ತು ಎಂದು ಹೇಳಿದ ವೈದ್ಯರು ಅವರನ್ನು ಮನೆಗೆ ಕಳುಹಿಸಿದರು.
ಆದರೆ, ಮನೆಗೆ ತಲುಪಿದ ಕೆಲವೇ ಗಂಟೆಗಳಲ್ಲಿ ಸಿದ್ದಮ್ಮಗೆ ತೀವ್ರ ರಕ್ತಸ್ರಾವ ಸಂಭವಿಸಿತು. ಕುಟುಂಬಸ್ಥರು ತಕ್ಷಣವೇ ಅವರನ್ನು ಮರಳಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ರಕ್ತಸ್ರಾವ ತೀವ್ರಗೊಂಡ ಕಾರಣದಿಂದ ಅವರು ಅಸುನೀಗಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಇನ್ನೊಂದು ಆಸ್ಪತ್ರೆಗೆ ಕಳುಹಿಸಿದರೂ, ಅಲ್ಲಿ ಅವರನ್ನು ಮೃತ ಘೋಷಿಸಲಾಯಿತು.
ಇದರಿಂದ ಕೋಪಗೊಂಡ ಕುಟುಂಬಸ್ಥರು ಆಸ್ಪತ್ರೆಯ ಆಂಬುಲೆನ್ಸ್ ಮೇಲೆ ಕಲ್ಲು ತೂರಿ ಜಖಂಗೊಳಿಸಿದ್ದಾರೆ. ಜೊತೆಗೆ, ಆಸ್ಪತ್ರೆಯಿಂದ ಹೊರಡುತ್ತಿದ್ದ ವೈದ್ಯೆಯ ತಂದೆಯ ಕಾರಿನ ಮೇಲೆಯೂ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿಬಂದಿದೆ.
ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಪ್ಪ ಯರಗೋಳ, ಡಾ. ಅಮರೇಶ ಪಾಟೀಲ, ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್ಐ ಮುದ್ದುರಂಗಸ್ವಾಮಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡರು.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.