ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತ್ಯಾಗರಾಜ ಕಾಲನಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಜಿಲ್ಲಾ ಪೊಲೀಸರು ಪ್ರಮುಖ ಯಶಸ್ಸು ಸಾಧಿಸಿದ್ದಾರೆ. ಆರೋಪಿಗಳನ್ನು ಬಂಧಿಸುವ ಜೊತೆಗೆ ಕಳವು ಮಾಡಲಾದ ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 35.14 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನ ಮತ್ತು ಪೊಲೀಸರ ಕಾರ್ಯಾಚರಣೆ

ಜ.10ರಂದು ಅಶ್ವತ್ಥನಾರಾಯಣ ಶೆಟ್ಟಿ ಎಂಬುವವರ ಮನೆಗೆ ಬೀಗ ಹಾಕಿ ಕುಟುಂಬಸ್ಥರು ಬೆಂಗಳೂರಿಗೆ ತೆರಳಿದ್ದರು. ಆ ರಾತ್ರಿ ಕಳ್ಳರು ಬೀಗ ಮುರಿದು ಒಳಹೋದರು ಮತ್ತು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಘಟನೆಯ ಬಗ್ಗೆ ಮಾಲೀಕರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.

ತಕ್ಷಣ ಪೊಲೀಸ್ ತಂಡ ಸಕ್ರಿಯವಾಗಿ ಕಾರ್ಯಾಚರಣೆ ನಡೆಸಿತು. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅನುಮಾನಾಸ್ಪದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಯಿತು. ಕಳ್ಳರು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ಖಾಸಗಿ ವಾಹನದಲ್ಲಿ ಹೋದಾಗ, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸಮೀಪ ಅಪಘಾತಕ್ಕೆ ಒಳಗಾದರೂ, ತಮ್ಮ ಕಾರ್ಯಚರಣೆಯನ್ನು ನಿಲ್ಲಿಸದೆ ಮುಂದುವರಿಸಿದರು.

ಬಂಧಿತರು ಮತ್ತು ವಶಪಡಿಸಿಕೊಳ್ಳಲಾದ ವಸ್ತುಗಳು

ಈ ಪ್ರಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾದಪಟ್ಟಣದ ನೂರುಲ್ಲಾ (50), ಆತನ ಪತ್ನಿ ಹಮೀನಾ ಬೀ, ಹಾರೋಗದ್ದೆಯ ವಿನೋದ್ ಮಾರ್ಕಕರ್ ಮತ್ತು ಸಾಗರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ 412 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 2 ಕೈಗಡಿಯಾರಗಳು ಮತ್ತು ನಗದು ಸೇರಿ ಒಟ್ಟು 35,14,460 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ನೀಡಿದ ಸಲಹೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರು ಕೆಲಸದ ನಿಮಿತ್ತ ಮನೆಯಿಂದ ಹೊರಡುವಾಗ ತಮ್ಮ ಆಭರಣಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿ ಇಡಬೇಕೆಂದು ಸಲಹೆ ನೀಡಿದರು. ಜೊತೆಗೆ, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಹಾಗೂ ಅಪರಾಧ ಚಟುವಟಿಕೆ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಮನವಿ ಮಾಡಿದರು.

ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ, ಉಪ ನಿರೀಕ್ಷಕ ಚಂದ್ರಕಲಾ, ಗೋಪಾಲ, ರಮೇಶ್ ಗುಗ್ಗುರಿ, ಪ್ರಭಾಕರ್, ಶ್ರೀರಾಮಯ್ಯ, ರಿಜ್ವಾನ್, ಶ್ರೀನಿವಾಸರೆಡ್ಡಿ, ಅಶ್ವತ್ಥ್, ಶಿವಶೇಖರ್, ಮಹಾಂತೇಶ್, ಮರುಳು ಸಿದ್ದೇಶ್ವರ, ರವಿಕುಮಾರ್ ಮತ್ತು ಮುನಿಕೃಷ್ಣ ಅವರನ್ನೊಳಗೊಂಡ ತಂಡದ ಶ್ರಮ ಪ್ರಮುಖ ಪಾತ್ರವಹಿಸಿದೆ.

ಈ ಪ್ರಕರಣದ ಯಶಸ್ವಿ ಭೇದನೆಗೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!