ಯಾದಗಿರಿ ಜಿಲ್ಲೆಯ ಅರಕೇರ ಗ್ರಾಮದಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಮಕ್ಕಳು ಶೌಚಾಲಯಗಳನ್ನು ತೊಳೆುತ್ತಿರುವ ಘಟನೆ ಕೂಡಲೇ ವೈರಲ್ ಆಗಿದೆ. ವಿಡಿಯೋದಲ್ಲಿದ್ದ ದೃಶ್ಯಗಳಲ್ಲಿ ಮಕ್ಕಳು ಪೊರಕೆ, ಬಕೆಟ್ ಹಿಡಿದು ಶೌಚಾಲಯ ಶುದ್ಧಪಡಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಈ ದೃಶ್ಯವೈರಲ್ ಆಗುತ್ತಿದ್ದಂತೆ ಪೋಷಕರಲ್ಲಿ ಆಕ್ರೋಶ ಜ್ವಾಲೆಯಾಗಿ ಭುಗಿಲೆದ್ದಿದ್ದು, ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಬೇಕಾಗಿರುವಾಗ, ಅವರಿಗೆ ಶೌಚಾಲಯ ತೊಳೆಯುವ ಕೆಲಸ ಕೊಡುವುದು ಸರ್ವಥಾ ನಿರ್ಲಕ್ಷ್ಯ ಮತ್ತು ಮಾನವೀಯತೆಯ ವಿರೋಧಿ ಎಂತೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕಿಂತ ಮುಂಚೆಯೂ ರಾಜ್ಯದ ಹಲವೆಡೆ ಶಾಲಾ ಮಕ್ಕಳಿಂದ ಶೌಚಾಲಯ ತೊಳೆಯುವಂತಹ ದುರ್ಘಟನೆಗಳು ವರದಿಯಾಗಿದ್ದವು. ಅದನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರವು ಶಿಕ್ಷಣ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆದರೂ ಈ ರೀತಿಯ ಘಟನೆಗಳು ಮತ್ತೆ ನಡೆಯುತ್ತಿರುವುದು ಶಾಲಾ ಆಡಳಿತದ ನಿರ್ಲಕ್ಷ್ಯವನ್ನು ಬಯಲುಮಾಡುತ್ತಿದೆ.
ಈ ಸಂಬಂಧ ಸ್ಥಳೀಯ ಅಧಿಕಾರಿಗಳು ತನಿಖೆಗೆ ಚಾಲನೆ ನೀಡಿದ್ದು, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಜನರ ಒತ್ತಾಯ ಹೆಚ್ಚುತ್ತಿದೆ.
