
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಪ್ರೀತಿಸಿದ ಯುವತಿಯ ಮಾನಸಿಕ ಕಿರುಕುಳ ತಾಳಲಾರದ ಸ್ಥಿತಿಗೆ ತಲುಪಿದ ಯುವಕನು ಸೆಲ್ಫಿ ವಿಡಿಯೋ ಮಾಡಿರುವ ಬೆನ್ನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾದ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಜೂನ್ 13ರಂದು ರಾಜಘಟ್ಟ ಗ್ರಾಮದ ಕೆರೆ ಸಮೀಪ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದು, ನಂತರ ವಿಷಪೂರಿತ ಮಾತ್ರೆ ಸೇವಿಸಿದ್ದಾನೆ. ತನ್ನ ಸಾವಿಗೆ ಕಾರಣವಾಗಿ ಯುವತಿ ಹಾಗೂ ಆಕೆಯ ಕುಟುಂಬಸ್ಥರು ಜವಾಬ್ದಾರರಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾನೆ.
ವೀಡಿಯೋದಲ್ಲಿ ಪ್ರೇಮದ ಹೆಸರಿನಲ್ಲಿ ಗಗನ ಎನ್ನುವ ಯುವತಿ ನಿರಂತರ ಕಿರುಕುಳ ನೀಡುತ್ತಿದ್ದಳು. ಜೊತೆಗೆ ಮತ್ತೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದಳು ಎಂಬ ಆರೋಪವನ್ನೂ ಮಂಜುನಾಥ್ ಮಾಡಿದ್ದಾನೆ. ತನ್ನನ್ನು ಸುಳ್ಳು ಆಶ್ವಾಸನೆಗಳೊಂದಿಗೆ ಮೋಸಗೊಳಿಸಲಾಗಿದ್ದು, ಆಕೆಯ ಕುಟುಂಬದಿಂದಲೂ ಆತ ಹಲ್ಲೆ ಮತ್ತು ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾನೆ ಎನ್ನಲಾಗಿದೆ.
ಮಾತ್ರೆ ಸೇವನೆಯಿಂದಾಗಿ ಮಂಜುನಾಥ್ ಅಸ್ವಸ್ಥಗೊಂಡಿದ್ದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಯುವಕ ಮೃತಪಟ್ಟಿದ್ದಾನೆ.
ಯುವಕನ ಮರಣೋತ್ತರ ವೀಡಿಯೋ ಹರಿದಾಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೂರು ಪಡೆದುಕೊಂಡ ಪೊಲೀಸರು ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದು, ಮಂಜುನಾಥ್ನ ಕೊನೆಯ ಸೆಲ್ಫಿ ವಿಡಿಯೋವನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.