ಧಾರವಾಡ: ಹುಬ್ಬಳ್ಳಿ-ಧಾರವಾಡ ಬಿ ಆರ್ ಟಿ ಎಸ್ ಕಾರಿಡಾರ್‌ನ ಪಿಬಿ ರಸ್ತೆ ಮೇಲೆ ಭಾನುವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಕಲಘೇರಿ ನಿವಾಸಿಯಾಗಿರುವ 34 ವರ್ಷದ ಶಿವಾನಂದ್ ಅಡಿಯಪ್ಪ ಮಾಳಗಿ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಯಾಗಿರುವ 28 ವರ್ಷದ ಮಂಜುನಾಥ್ ತಿಪ್ಪಣ್ಣ ಮಾಳಗಿ ಕಾರು ಚಲಾಯಿಸುತ್ತಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರೂ ಹುಬ್ಬಳಿಯಿಂದ ಧಾರವಾಡದತ್ತ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.

ಘಟನೆ ಸ್ಥಳವಾದ ಧಾರವಾಡದ ವಾರ್ಡನ್ ಹಾಲ್ ಬಳಿ ಬರುತ್ತಿದ್ದ ವೇಳೆ, ಗದಗ್ ಕಡೆಗೆ ಸಾಗುತ್ತಿದ್ದ ಇನ್ನೋವಾ ಕಾರು ಎದುರುಗಡೆಯಿಂದ ಬಂದಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿ, ಶಿವಾನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮಂಜುನಾಥ್ ಅವರನ್ನು ತುರ್ತು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗದಗ್ ಮೂಲದ ಮನೀಶ್ ರೆಡ್ಡಿ ಬಸವರೆಡ್ಡಿ ಹುಚ್ಚಣ್ಣವರು ಮತ್ತು ಮಂಜುನಾಥ್ ರೆಡ್ಡಿ ಸಾಸಿವೆಹಳ್ಳಿ ಎಂಬವರಿಗೂ ಗಾಯಗಳಾಗಿದ್ದು, ಅವರನ್ನು ಕೂಡ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೊಳಗಾದ ಎರಡೂ ವಾಹನಗಳನ್ನು ಕ್ರೇನ್‌ನ ಸಹಾಯದಿಂದ ಸ್ಥಳಾಂತರಿಸಲಾಗಿದ್ದು, ಸಂಬಂಧಿತ ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ವರದಿ: ಶಿವರಾಜ್ ಪಿ.ಆರ್.

error: Content is protected !!