ಹಾಸನ, ಜುಲೈ 7: ಕಿರುಕುಳದಿಂದ ಬೇಸತ್ತ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ (ಚಾಲಕ/ಕಂಡಕ್ಟರ್) ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಇಂದು ಮುಂಜಾನೆ ಬೇಲೂರಿನ ಡಿಪೋದಲ್ಲಿ ನಡೆದಿದೆ. ಸ್ಥಿತಿ ಗಂಭೀರವಾಗಿರುವ ಈ ನಿರ್ವಾಹಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟಿಗಾನಹಳ್ಳಿ ಗ್ರಾಮದ ನಿವಾಸಿ ಹರೀಶ್ ಎಂಬವರು ಬೇಲೂರು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಚಾಲಕ/ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೂರಿನ ಪ್ರಕಾರ, ಇಂದು ಅವರು ಕರ್ತವ್ಯಕ್ಕೆ ಹಾಜರಾದಾಗ ಅವರಿಗೆ ಯಾವುದೇ ಕೆಲಸ ನೀಡದೆ, ಮಹಿಳಾ ಡಿಪೋ ವ್ಯವಸ್ಥಾಪಕರಾದ ಶಾಜಿಯಾ ಭಾನು ಅವರು ಸಾರ್ವಜನಿಕವಾಗಿ ನಿಂದಿಸಿ ಮಾನಸಿಕವಾಗಿ ಕಿರುಕುಳ ನೀಡಿದರೆಂದು ಸಹೋದ್ಯೋಗಿಗಳು ಹೇಳಿದ್ದಾರೆ.

ಆಕ್ರೋಶಿತನಾದ ಹರೀಶ್, ಕೆಲಸದ ಸ್ಥಳದಲ್ಲಿಯೇ ವಿಶ್ರಾಂತಿ ಕೊಠಡಿಗೆ ತೆರಳಿ ವಿಷಪಾನ ಮಾಡಿದ್ದಾರೆ. ಈ ಘಟನೆ ಗಮನಿಸಿದ ಸಹೋದ್ಯೋಗಿಗಳು ತಕ್ಷಣವೇ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಡಿಪೋ ಅಧಿಕಾರಿಗಳ ವಿರುದ್ಧವೂ ಪರಿಶೀಲನೆ ನಡೆಸುವ ನಿರೀಕ್ಷೆ ವ್ಯಕ್ತವಾಗಿದೆ.

ಈ ಘಟನೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯಲ್ಲಿ ಆತಂಕ ಹಾಗೂ ಆಕ್ರೋಶ ಉಂಟುಮಾಡಿದ್ದು, ಅಧಿಕಾರಿಗಳ ವರ್ತನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

error: Content is protected !!