ಕಡಬ ತಾಲೂಕಿನ ಕೋಡಿಂಬಾಳದ ಕೋರಿಯಾರ್ ಸಮೀಪದ ರೈಲ್ವೇ ಟ್ರ್ಯಾಕ್ ಬಳಿ ಜೂನ್ 8ರಂದು ಮನಭಾರ ಹಾಕುವಂತಹ ದಾರుణ ಘಟನೆಯೊಂದು ನಡೆದಿದ್ದು, ಅಣ್ಣನನ್ನು ತಮ್ಮನೇ ಬೆಂಕಿ ಹಾಕಿ ಕೊಲ್ಲಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಗದಗ ಮೂಲದ ಹನುಮಪ್ಪ ಎಂಬವರು ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಣ್ಣ-ತಮ್ಮಂದಿರಾದ ಹನುಮಪ್ಪ ಹಾಗೂ ನಿಂಗಪ್ಪ ಇಬ್ಬರೂ ಪುತ್ತೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಜೂನ್ 8ರ ಮಧ್ಯಾಹ್ನ ಮಂಗಳೂರು-ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿದ ಅವರು ಬಜಕರೆ ರೈಲು ನಿಲ್ದಾಣದಲ್ಲಿ ಇಳಿದರು.

ನಂತರ, ನಿಲ್ದಾಣದಿಂದ ಸಿಕ್ಕಾಪಟ್ಟೆ ದೂರವಿರುವ ರೈಲ್ವೆ ಹಳಿಯೊಂದರ ಬಳಿ ಇಬ್ಬರೂ ತೆರಳಿದ್ದು, ಅಲ್ಲಿಯೇ ತಮ್ಮ ನಿಂಗಪ್ಪ ಅಣ್ಣ ಹನುಮಪ್ಪನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಆರೋಪ ಎದುರಾಗಿದೆ. ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಹನುಮಪ್ಪ ಪಕ್ಕದಲ್ಲೇ ಇದ್ದ ಚರಂಡಿ ನೀರಿಗೆ ಜಿಗಿದ ಪರಿಣಾಮ ಬೆಂಕಿ ಕೆಲಮಟ್ಟಿಗೆ ನಂದಿದರೂ, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ಅವರ ಕಿರುಚಾಟ ಕೇಳಿ ಧಾವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆ ಹಚ್ಚಿದ ನಂತರ, ತಕ್ಷಣವೇ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ, ಆರೋಪಿತ ನಿಂಗಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ರೈಲ್ವೇ ಹಳಿಯಲ್ಲಿ ನಡೆದಿರುವುದರಿಂದ ಈ ಪ್ರಕರಣವನ್ನು ರೈಲ್ವೇ ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಘಟನೆಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ, ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

Leave a Reply

Your email address will not be published. Required fields are marked *

Related News

error: Content is protected !!