ಭುವನೇಶ್ವರ, ಜುಲೈ 19: ಒಡಿಶಾದ ಪುರಿ ಜಿಲ್ಲೆಯ ಬಾಲಂಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಭಯಾನಕ ಘಟನೆ ನಡೆಯಿದ್ದು, ಅಲ್ಪಸಂಖ್ಯಾತ ಸಮುದಾಯದ 15 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೂವರು ಯುವಕರ ಗುಂಪು ದಾಳಿ ನಡೆಸಿದ್ದು, ಆಕೆಗೆ ಬೆಂಕಿ ಹಚ್ಚಿದ ಘೋರ ಪ್ರಕರಣ ಬೆಳಕಿಗೆ ಬಂದಿದೆ. ಗಂಭೀರ ಸುಟ್ಟ ಗಾಯಗಳೊಂದಿಗೆ ಬಾಲಕಿಯನ್ನು ಭುವನೇಶ್ವರದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಬಾಲಕಿ ಶನಿವಾರ ಬೆಳಗ್ಗೆ ತನ್ನ ಸ್ನೇಹಿತೆಯ ಮನೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಯುವಕರು ಆಕೆಯ ಬಾಯಿಗೆ ಕರ್ಚೀಪ್ ಬಿಗಿದು ಅಪಹರಿಸಿದ್ದಾರೆ. ಬಳಿಕ ಭಾರ್ಗವಿ ನದಿಯ ದಡಕ್ಕೆ ಕರೆದೊಯ್ದು, ಸೀಮೆಎಣ್ಣೆ ಅಥವಾ ಅದಕ್ಕೆ ಸಮಾನ ದ್ರಾವಣದೊಂದಿಗೆ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಆಕೆ ಜೀವ ಉಳಿಸಲು ಪಲಾಯನ ಮಾಡಿದ್ದು, ಸಮೀಪದ ಹಳ್ಳಿಗೆ ಓಡಿ ಹೋಗಿ ಸಹಾಯಕ್ಕಾಗಿ ಕೂಗಿದ್ದಾರೆ.

ಸ್ಥಳೀಯ ನಿವಾಸಿ ದುಃಖಿಶ್ಯಾಮ್ ಸೇನಾಪತಿ ಬಾಲಕಿಯ ಕೂಗಾಟ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಿ ಆಕೆಯನ್ನು ರಕ್ಷಿಸಿದ್ದಾರೆ. ಆತನ ಮನೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದು, ಹೊಸ ಬಟ್ಟೆಗಳನ್ನು ಒದಗಿಸಿದ್ದಾರೆ.

ಮೂವರು ಯುವಕರು ಬಾಲಕಿಯನ್ನು ಬಲವಂತವಾಗಿ ಕರೆದೊಯ್ದು ಬೆಂಕಿ ಹಚ್ಚಿರುವುದಾಗಿ ಆಕೆ ತಿಳಿಸಿದ್ದಾಳೆ” ಎಂದು ವಿವರಿಸಿದರು.

ಪೊಲೀಸ್ ಇಲಾಖೆಯು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಆರಂಭಿಸಿದ್ದು, ಪುರಿ ಜಿಲ್ಲೆಯ ಹಂಗಾಮಿ ಎಸ್‌ಪಿ ಹಾಗೂ ಡಿಐಜಿ ಪಿನಾಕ್ ಮಿಶ್ರಾ ನೇತೃತ್ವದ ವಿಶೇಷ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಘಟನೆ ನಡೆದ ಸ್ಥಳದಲ್ಲಿ ಎರಡು ಬಾಟಲ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಸೀಮೆಎಣ್ಣೆಯ ಸುಳಿವು ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ಶೀಘ್ರವೇ ಬಂಧಿಸುವ ಭರವಸೆ ನೀಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೂರ್ವನಿಯೋಜಿತ ಕ್ರೂರ ಕೃತ್ಯ ಎನ್ನುವ ಶಂಕೆಯೂ ವ್ಯಕ್ತವಾಗಿದೆ.

ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶ ಹುಟ್ಟುಹಾಕಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಕೂಗು ಎದ್ದಿದೆ.

Related News

error: Content is protected !!