ಭದ್ರಾವತಿ: ನ್ಯೂಟೌನ್ ಪೊಲೀಸರು ಇತ್ತೀಚೆಗೆ ನಡೆದ ಮನೆ ಕಳ್ಳತನ ಪ್ರಕರಣವೊಂದನ್ನು ಭೇದಿಸಿ, ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿಯನ್ನು ಭದ್ರಾವತಿಯ ಮೀನುಗಾರರ ಬೀದಿಯ ನಿವಾಸಿ ಜೈಕಾಂತ್ ಪಿ. (21) ಎಂದು ಗುರುತಿಸಲಾಗಿದೆ.

ಮೇ 2ರ ರಾತ್ರಿ, ಬಿ.ಎಚ್. ರಸ್ತೆ ಬಳಿ ಇರುವ ಮೀನುಗಾರರ ಬೀದಿಯ ಮನೆಯಲ್ಲಿ ಸಿಮೆಂಟ್ ಶೀಟ್ ಒಡೆದು ಒಳ ಪ್ರವೇಶಿಸಿದ ಕಳ್ಳರು, ಸುಮಾರು ₹1.12 ಲಕ್ಷ ಮೌಲ್ಯದ ಬಂಗಾರದ ಆಭರಣಗಳು, ನಗದು ಹಾಗೂ ಗಡಿಯಾರವನ್ನು ಕಳವು ಮಾಡಿದ್ದರು. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆಗೆ ಜಿಲ್ಲಾ ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್, ಹೆಚ್ಚುವರಿ ಎಸ್‌ಪಿಗಳು ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ. ಕಾರಿಯಪ್ಪ ಅವರು ಮಾರ್ಗದರ್ಶನ ನೀಡಿದರು. ನಗರ ಉಪ ವಿಭಾಗದ ಡಿವೈಎಸ್‌ಪಿ ಕೆ.ಆರ್. ನಾಗರಾಜ್ ಹಾಗೂ ಸಿಪಿಐ ಶ್ರೀಶೈಲ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ನ್ಯೂಟೌನ್ ಠಾಣೆಯ ಪಿಎಸ್‌ಐ ಟಿ. ರಮೇಶ್ ನೇತೃತ್ವದಲ್ಲಿ ಎಎಸ್‌ಐ ಟಿ.ಪಿ. ಮಂಜಪ್ಪ, ಸಿ.ಎಚ್.ಸಿ. ನವೀನ್ ಮತ್ತು ಸಿಪಿಸಿ ನಾಗರಾಜ್ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ತಪಾಸಣೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಅವನಿಂದ ಕಳವಾದ ಆಭರಣಗಳು ಹಾಗೂ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ಇನ್ನಷ್ಟು ಮಾಹಿತಿ ಸಂಗ್ರಹಿಸಲು ತನಿಖೆ ಮುಂದುವರೆಸಿದ್ದಾರೆ.

Related News

error: Content is protected !!