
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ಉಂಟಾದ ಗೊಂದಲ ಸಂಬಂಧ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ಕ್ರಮ ಜರುಗಿಸಲಾಗಿದೆ.
ಸೋಮವಾರ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ನಡೆಸುತ್ತಿದ್ದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಂದು ವೇದಿಕೆಯತ್ತ ನುಗ್ಗಿ ಪ್ರತಿಭಟನೆಗೆ ಮುಂದಾಗಿದ್ದಳು. ಈ ಹಿನ್ನಲೆಯಲ್ಲಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಘಟನೆ ವೇಳೆ ಪೊಲೀಸರು ಸೂಕ್ತ ರೀತಿಯಲ್ಲಿ ತಕ್ಷಣ ಸ್ಪಂದಿಸದೆ ಕರ್ತವ್ಯ ಲೋಪ ಮಾಡಿಕೊಂಡಿದ್ದಾರೆಂಬ ಆರೋಪದ ಮೇರೆಗೆ ಖಡೇಬಜಾರ್ ಠಾಣೆಗೆ ಸೇರಿದ ಕಾನ್ಸ್ಟೇಬಲ್ ಬಿ.ಎ. ನೌಕುಡಿ ಮತ್ತು ಕ್ಯಾಂಪ್ ಠಾಣೆಯ ಕಾನ್ಸ್ಟೇಬಲ್ ಮಲ್ಲಪ್ಪ ಹಡಗಿನಾಳರನ್ನು ಅಮಾನತುಗೊಳಿಸಲಾಗಿದೆ.
ಈ ಬಗ್ಗೆ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಥೋಡ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಸಮಾರಂಭದ ವೇಳೆ ಶಿಸ್ತು ಕಾಯ್ದುಕೊಳ್ಳಲು ಜವಾಬ್ದಾರಿಯಾದ ಪೊಲೀಸರು ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ವಿಫಲರಾದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರಿಂದ ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಪೊಲೀಸರು ತಮ್ಮ ಕರ್ತವ್ಯಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂಬ ಸಂದೇಶ ನೀಡಲಾಗಿದೆ.