
ಬಂಗಾರಪೇಟೆಯಲ್ಲಿ ನಡೆದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಮಹಿಳಾ ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿಯಿಂದ ₹4.17 ಲಕ್ಷ ಮೌಲ್ಯದ 43 ಗ್ರಾಂ ಚಿನ್ನ ಹಾಗೂ 1 ಕೆ.ಜಿ 454 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನಕ್ಕೆ ಶಿಕಾರಾದವರು ಬಂಗಾರಪೇಟೆ ನಿವಾಸಿ ಲಕ್ಷ್ಮಿದೇವಮ್ಮ. ಅವರು ಮೂರು ದಿನಗಳ ಕಾಲ ತಮ್ಮ ತವರು ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಯಾರೋ ಮನೆಯ ಬೀಗ ಮುರಿದು ಒಳನುಗ್ಗಿ ಆಭರಣಗಳನ್ನು ಕದಿದಿದ್ದರು. ಈ ಸಂಬಂಧ ಅವರು ಏಪ್ರಿಲ್ 28ರಂದು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕೇಸ್ ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಅತೀ ಕಡಿಮೆ ಅವಧಿಯಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತ ಮಹಿಳೆ ಬಂಗಾರಪೇಟೆಯ ರುಕ್ಕಮ್ಮ ಎನ್ನಲಾಗಿದೆ.
ಈ ಕಾರ್ಯಾಚರಣೆ ಕೆಜಿಎಫ್ ಎಸ್ಪಿ ಕೆ.ಎಂ. ಶಾಂತರಾಜು ಮತ್ತು ಡಿವೈಎಸ್ಪಿ ಎಸ್. ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆರ್. ದಯಾನಂದ್ ನೇತೃತ್ವದಲ್ಲಿ ಪಿಎಸ್ಐ ಪ್ರಕಾಶ್ ನರಸಿಂಗ್ ಹಾಗೂ ಸಿಬ್ಬಂದಿ ನಾಗೇಶ್, ಚಲಪತಿ, ಮಧುಕುಮಾರ್, ಸುನೀಲ್ ಮತ್ತು ಮುನೇಂದ್ರ ಕೆಲಸ ಮಾಡಿದ್ದಾರೆ.
ಅಪರಾಧ ವಿಚಾರಣೆಯಲ್ಲಿ ತಕ್ಷಣ ಸ್ಪಂದಿಸಿದ ಮತ್ತು ಆಭರಣಗಳನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯಕ್ಷಮತೆಗೆ ಎಸ್ಪಿ ಶಾಂತರಾಜು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವರದಿ: ರೋಶನ್