ಬಾಗೇಪಲ್ಲಿ: ಮೈಕ್ರೊ ಪೈನಾನ್ಸ್ ಸಂಸ್ಥೆಗಳ ಸಾಲ ವಸೂಲಿ ಕ್ರಮಗಳ ವಿರುದ್ಧ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಸಂತ್ರಸ್ತ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಮುಖ್ಯರಸ್ತೆಯಲ್ಲಿ ಜಾಥಾ ನಡೆಸಿದ ಮಹಿಳೆಯರು, ನಂತರ ತಾಲೂಕು ಕಚೇರಿಯ ಎದುರು ಧರಣಿ ನಡೆಸಿ ತಹಸೀಲ್ದಾರ್ ಮನಿಷಾ ಎನ್. ಪತ್ರಿ ಅವರಿಗೆ ಮನವಿ ಸಲ್ಲಿಸಿದರು.

ಬಲವಂತದ ವಸೂಲಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಈ ಸಂದರ್ಭದಲ್ಲಿ ಸಂಘಟನೆಯ ಸಂಚಾಲಕಿ ಸಾವಿತ್ರಮ್ಮ ಮಾತನಾಡಿ, ಮೈಕ್ರೊ ಪೈನಾನ್ಸ್ ಸಂಸ್ಥೆಗಳು ಮಹಿಳೆಯರಿಗೆ ಬಲವಂತವಾಗಿ ಸಾಲ ನೀಡಿ ನಂತರ ಅದನ್ನು ವಾಪಸು ಪಡೆಯುವ ವೇಳೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ ಕಿಡಿಕಾರಿದರು. ಇಂತಹ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳು ಪಡೆದಿರುವ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು ಮತ್ತು ಈ ರೀತಿಯ ದೌರ್ಜನ್ಯಕ್ಕೆ ತಡೆಯೊಡ್ಡಲು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಪಾರದರ್ಶಕತೆ ಮತ್ತು ಸರ್ಕಾರದ ಹಸ್ತಕ್ಷೇಪದ ಅಗತ್ಯ

ಸಿಪಿಐಎಂ ಮುಖಂಡ ಚನ್ನರಾಯಪ್ಪ ಮಾತನಾಡಿ, ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಕಾರ್ಯವಿಧಾನದಲ್ಲಿ ಪಾರದರ್ಶಕತೆ ಕಾಪಾಡಲು ಹೊಸ ನಿಯಮಾವಳಿ ರೂಪಿಸಬೇಕೆಂದರು. ಈಗಾಗಲೇ ವಸೂಲಿ ಮಾಡಿರುವ ಅಧಿಕ ಬಡ್ಡಿ ಹಣವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿಯಲ್ಲಿ ನೇರವಾಗಿ ಬಡವರಿಗೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಸ್ವಯಂ ಉದ್ಯೋಗ ಪ್ರೋತ್ಸಾಹಿಸುವ ಮಹಿಳೆಯರಿಗೆ ಕನಿಷ್ಠ ₹5 ಲಕ್ಷದವರೆಗೆ ಸರಳ ನಿಯಮಾವಳಿಯಡಿ ಬ್ಯಾಂಕ್ ಸಾಲ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದಿಂದ ಕಾನೂನು ಜಾರಿಗೆ ಒತ್ತಾಯ

ಪ್ರತಿಭಟನೆಯ ಭಾಗವಾಗಿ ಜನವಾದಿ ಮಹಿಳಾ ಸಂಘಟನೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿತು. ಮೈಕ್ರೊ ಪೈನಾನ್ಸ್ ಸಂಸ್ಥೆಗಳ ಬಲವಂತದ ವಸೂಲಿ ಕ್ರಮಗಳಿಗೆ ನಿಯಂತ್ರಣ ಹಾಕಲು ಹೊಸ ಕಾನೂನು ಜಾರಿಯಾಗಬೇಕು. ಮಹಿಳಾ ಸ್ವಸಹಾಯ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಸಾಲವನ್ನು ಸಬ್ಸಿಡಿ ಸಹಿತವಾಗಿ ಸರ್ಕಾರವೇ ವಿತರಿಸಬೇಕೆಂದು ಸಾವಿತ್ರಮ್ಮ ಒತ್ತಾಯಿಸಿದರು.

ಈ ಪ್ರತಿಭಟನೆಯಲ್ಲಿ ಮುಖಂಡರಾದ ಸೋಮಶೇಖರ್, ಎಸ್. ಲಕ್ಷ್ಮಣರೆಡ್ಡಿ ಹಾಗೂ ಸಂತ್ರಸ್ತ ಮಹಿಳೆಯರು ಸೇರಿದಂತೆ ಹಲವಾರು ಜನರು ಭಾಗವಹಿಸಿದರು.

error: Content is protected !!