
ತುಮಕೂರಿನ ಎಸ್ಐಟಿ ಪ್ರದೇಶದಲ್ಲಿ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದ ಆರೋಪದ ಮೇಲೆ 25 ವರ್ಷದ ಇಂಜಿನಿಯರಿಂಗ್ ಪದವೀಧರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಶರತ್ ಎಂದು ಗುರುತಿಸಲಾಗಿದೆ.
ಘಟನೆ ವಿವರ:
ತುಮಕೂರಿನ ಐವಿ ಕ್ರಾಸ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿಯರು ತಮ್ಮ ಒಳ ಉಡುಪುಗಳು ಕಾಣೆಯಾಗುತ್ತಿರುವುದನ್ನು ಗಮನಿಸಿದರು. ಇದರಿಂದ ಆತಂಕಗೊಂಡ ಅವರು ಈ ವಿಷಯವನ್ನು ಮನೆ ಮಾಲೀಕರಿಗೆ ತಿಳಿಸಿದ್ದಾರೆ. ಈ ಸಂಬಂಧ, ಮನೆ ಮಾಲೀಕರು ಮಾರ್ಚ್ 7 ರಂದು ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ತನಿಖೆ ಕೈಗೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಶರತ್ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ವಿದ್ಯಾರ್ಥಿನಿಯರ ಮನೆಯ ಬಳಿ ನಿಲ್ಲಿಸಿ ಒಳ ಉಡುಪುಗಳನ್ನು ಕದಿಯುತ್ತಿರುವುದು ದೃಢಪಟ್ಟಿದೆ. ವಿಚಾರಣೆ ವೇಳೆ ಶರತ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಎಸ್ಐಟಿ ಪ್ರದೇಶ, ಎಸ್ಎಸ್ ಪುರಂ ಮತ್ತು ಅಶೋಕನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಈ ಕೃತ್ಯ ಎಸಗಿರುವುದಾಗಿ ಬಹಿರಂಗಪಡಿಸಿದ್ದಾನೆ.
ಆರೋಪಿಯ ಹಿನ್ನೆಲೆ:
ಶರತ್ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯವನು. ಆತನ ಪೋಷಕರು ಶಿಕ್ಷಕರಾಗಿದ್ದು, ಸಹೋದರ ಇಂಜಿನಿಯರ್ ಆಗಿದ್ದಾರೆ. ಈ ಕೃತ್ಯದ ಬಗ್ಗೆ ಕುಟುಂಬದವರು ಪೂರ್ವಾಪರ ತಿಳಿದಿರಲಿಲ್ಲ ಎಂದು ವರದಿಯಾಗಿದೆ. ವಯಸ್ಕರ ಚಲನಚಿತ್ರಗಳನ್ನು ನೋಡುವ ಅಭ್ಯಾಸದಿಂದ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಶರತ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಈ ಘಟನೆಯ ಬಗ್ಗೆ ದೂರು ನೀಡಲು ವಿದ್ಯಾರ್ಥಿನಿಯರು ನಿರಾಕರಿಸಿದ್ದರಿಂದ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿಲ್ಲ. ವಿಚಾರಣೆಯ ಸಮಯದಲ್ಲಿ, ಈಜುಕೊಳದಿಂದ ಮನೆಗೆ ಹೋಗುವಾಗ ಒಣಗಲು ಹಾಕಿದ ಒಳ ಉಡುಪುಗಳನ್ನು ನೋಡಿ ಕದಿಯಲು ನಿರ್ಧರಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.