
ಹುಬ್ಬಳ್ಳಿ: ಕೆಲಸದ ಸಂಬಂಧಿತ ವಿಚಾರವೇ ಕೊನೆಗೆ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆಯೆಂದು ಶಂಕಿಸಲಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿ ಶ್ರೀನಿವಾಸ್ ಎಂಬಾತನಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ.
ಮಾಹಿತಿಯಂತೆ, ಮೂರು ವರ್ಷಗಳ ಹಿಂದೆ ನಡೆದ ಒಂದು ಟೆಂಡರ್ನಲ್ಲಿ ಸಚಿನ್, ಸುನಿಲ್ ಸೇರಿದಂತೆ ಹಲವರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಶ್ರೀನಿವಾಸ್ ಕೂಡಾ ಆವೇ ಟೆಂಡರ್ನಲ್ಲಿ ಕೆಲಸ ಮಾಡಲು ಮುಂದಾಗಿದ್ದನು. ಇದರಿಂದ ಆಕ್ರೋಶಗೊಂಡ ಆರೋಪಿಗಳು ತಮ್ಮ ಕೆಲಸಕ್ಕೆ ಅಡ್ಡಿಯಾಗುತ್ತಾನೆಂಬ ಕಾರಣದಿಂದ ಶ್ರೀನಿವಾಸ್ ಮೇಲೆ ದಾಳಿ ನಡೆಸಿದರೆಂದು ಹೇಳಲಾಗುತ್ತಿದೆ.
ಚಾಕುಗಳಿಂದ ಹಲ್ಲೆ ನಡೆಸಿದ ಮೂವರು ಆರೋಪಿ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಶ್ರೀನಿವಾಸ್ ಅವರ ಕಣ್ಣು ಹಾಗೂ ದೇಹದ ಹಲವೆಡೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಕುರಿತು ಹುಬ್ಬಳ್ಳಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ. ವರದಿ: ಶಿವರಾಜ್ ಪಿ.ಆರ್.