ಮಂಡ್ಯ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ‘ದಿಶಾ’ ಸಭೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ಕೇಂದ್ರ ಸಚಿವ H. D. Kumaraswamy ಅವರ ಸಮ್ಮುಖದಲ್ಲಿ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಹಾಗೂ ಜೆಡಿಎಸ್ ಮಾಜಿ ಶಾಸಕರ ವಿರುದ್ಧ ಅಕ್ರಮ ಸಂಬಂಧದ ಗಂಭೀರ ಆರೋಪ ಮಾಡಿ ನ್ಯಾಯಕ್ಕಾಗಿ ಕಣ್ಣೀರಿಟ್ಟ ಘಟನೆ ಗಮನ ಸೆಳೆದಿದೆ.

ಮಳವಳ್ಳಿ ತಾಲ್ಲೂಕಿನ ಪ್ರಸನ್ನ ಕುಮಾರ್ ಎಂಬುವವರು ಈ ಆರೋಪ ಮಾಡಿದ್ದಾರೆ. ಮಳವಳ್ಳಿಯ ಮಾಜಿ ಶಾಸಕ ಡಾ. ಕೆ. ಅನ್ನದಾನಿ ತಮ್ಮ ಪತ್ನಿ ವಿಜಯಲಕ್ಷ್ಮಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅವರು ಸಚಿವರ ಮುಂದೆ ದೂರು ನೀಡಿದ್ದಾರೆ. ಸಭೆ ಮುಗಿಸಿ ಹೊರಬಂದ ಸಚಿವ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದ ಪ್ರಸನ್ನ, “ನನಗೆ ನ್ಯಾಯ ಕೊಡಿಸಿ” ಎಂದು ಬೇಡಿಕೊಂಡಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಸನ್ನ ಕುಮಾರ್, “ನನ್ನ ಪತ್ನಿಗಾಗಿ ಅನ್ನದಾನಿ ಅವರು ಮೈಸೂರಿನಲ್ಲಿ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಪ್ರತಿದಿನ ರಾತ್ರಿ ಅವರು ಅಲ್ಲಿಗೆ ತೆರಳುತ್ತಾರೆ” ಎಂದು ಆರೋಪಿಸಿದರು.

ಇದಲ್ಲದೆ, “ಪತ್ನಿ ಮತ್ತು ಮಾಜಿ ಶಾಸಕ ದಿನವೂ ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಬೆದರಿಕೆ ಹಾಕಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ನಿಯೊಂದಿಗೆ ಬದುಕಲು ಸಾಧ್ಯವಿಲ್ಲ. ವಿಚ್ಛೇದನ ಕೇಳಿದರೆ 30 ಲಕ್ಷ ರೂ. ಕೊಡಬೇಕು ಎಂದು ಷರತ್ತು ಹಾಕಿದ್ದಾಳೆ” ಎಂದು ತಮ್ಮ ನೋವನ್ನು ಹೊರಹಾಕಿದರು.

ಪ್ರಸನ್ನ ಕುಮಾರ್ ಅವರ ಅಳಲನ್ನು ಆಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, “ಈ ಕ್ಷಣದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಭೆಯ ನಂತರ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.

ಸ್ವಪಕ್ಷದ ಮಾಜಿ ಶಾಸಕರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಸೆಳೆಯುತ್ತಿದೆ.

error: Content is protected !!