ನಂಜನಗೂಡು ; ಸ್ನೇಹಿತನಿಗೆ ಖಾಸಗಿ ಬ್ಯಾಂಕ್ ನಲ್ಲಿ ಕೊಡಿಸಿದ ಸಾಲ ವ್ಯಕ್ತಿಗೆ ಮುಳುವಾಗಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ತಾಲೂಕು ದಂಡೀಕೆರೆ ಗ್ರಾಮದ ಬಳಿ ನಡೆದಿದೆ.
ನಂಜನಗೂಡು ತಾಲೂಕು ಮಲ್ಲೂಪುರ ಗ್ರಾಮದ ಸಿದ್ದೇಶ್(40) ಮೃತ ದುರ್ದೈವಿ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಸಿದ್ದೇಶ್ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿ ತಾನು ಮಾಡಿದ ತಪ್ಪಿಗಾಗಿ ಪತ್ನಿ‌, ಮಕ್ಕಳು, ತಂದೆ, ತಾಯಿ ಸಹೋದರನಿಗೆ ಕ್ಷಮೆಯಾಚಿಸಿದ್ದಾರೆ.
ಸಿದ್ದೇಶ್ ತನ್ನ ಹೆಸರಲ್ಲಿ ಸ್ನೇಹಿತನಿಗೆ ಖಾಸಗಿ ಐಸಿಐಸಿಐ ಬ್ಯಾಂಕ್ ನಲ್ಲಿ ತನ್ನ ದಾಖಲೆಗಳನ್ನು ನೀಡಿ ಕಾರು ಖರೀದಿಸಲು ಸಾಲ ಕೊಡಿಸಿದ್ದಾರೆ.ಜೊತೆಗೆ ಪರಿಚಯದವರಿಂದ 2 ಲಕ್ಷ ಕೈ ಸಾಲವನ್ನೂ ಸಹ ಕೊಡಿಸಿದ್ದಾರೆ.ಸ್ನೇಹಿತ ಉಪ್ಪಿನ ಹಳ್ಳಿ ಗ್ರಾಮದ ಮಣಿಕಂಠ ಸಾಲ ತೀರಿಸುವಲ್ಲಿ ವಿಫಲವಾಗಿದ್ದಾನೆ.ಬ್ಯಾಂಕ್ ಸಿಬ್ಬಂದಿಗಳು ಸಾಲ ತೀರಿಸುವಂತೆ ಮೃತ ವ್ಯಕ್ತಿ ಮಲ್ಲುಪುರ ಗ್ರಾಮದ ಸಿದ್ದೇಶ್ ಮೇಲೆ ಒತ್ತಡ ಹೇರಿದ್ದಾರೆ.ಇದರಿಂದ
ಮನನೊಂದ ಸಿದ್ದೇಶ್ ಮೈಸೂರು ತಾಲೂಕಿನ ವರುಣ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ದಂಡಿಕೇರಿ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ . ತಮಗಾದ ನೋವನ್ನ ಸಿದ್ದೇಶ್ ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಆತ್ಮೀಯ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಬಹಳ ಸಂಕಷ್ಟಕ್ಕೆ ಸಿಲುಕಿ ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳ ಸಾಲದ ಕಿರುಕುಳದಿಂದಾಗಿ ಇಂದು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ ಎಂದು ಮನನೊಂದು ತಮ್ಮ ಅಳಲು ತೋಡಿಕೊಂಡಿದ್ದಾರೆ

ಘಟನೆ ವಿವರ
ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮದ ಮೃತ ಸಿದ್ದೇಶ್ ಎಂಬವರು ಬಣ್ಣಾರಿ ಅಮ್ನನ್ ಶುಗರ್ ಕಾರ್ಖಾನೆ ಮುಂಭಾಗ ಕ್ಯಾಂಟೀನ್ ನಡೆಸುತ್ತಿದ್ದರು ಇದರಿಂದ ವ್ಯಾಪಾರ ವಹಿವಾಟು ಚೆನ್ನಾಗಿ ನಡೆದು ಸಿದ್ದೇಶ್ ಆರ್ಥಿಕವಾಗಿ ಸ್ವಲ್ಪ ಸದೃಢವಾಗಿದ್ದರು ಎನ್ನಲಾಗಿದೆ.
ಅಷ್ಟರಲ್ಲಿ ಉಪ್ಪಿನ ಹಳ್ಳಿ ಗ್ರಾಮದ ಗಾರೆ ಕೆಲಸ ಮಾಡುವ ಮಣಿಕಂಠ ಎಂಬುವವರು ಪರಿಚಯವಾಗಿ ನಂತರ ಆತ್ಮೀಯ ಸ್ನೇಹಿತರಾಗಿದ್ದರು
ಸ್ನೇಹಿತ ಮಣಿಕಂಠ ಲೋನ್ ಮುಖಾಂತರ ಕಾರು ತೆಗೆದುಕೊಳ್ಳಬೇಕು ಎಂದು ಸಿದ್ದೇಶ್ ಅವರಲ್ಲಿ ಕೇಳಿಕೊಂಡಿದ್ದ ಸ್ನೇಹಿತರಿಬ್ಬರೂ ಮೈಸೂರಿನ ಕಾರು ಶೋರೂಮ್ ಗೆ ಹೋಗಿ ಸಾಲದ ರೂಪದಲ್ಲಿ ಕಾರು ಖರೀದಿಸಲು ಮಾಹಿತಿ ಪಡೆದಿದ್ದಾರೆ. ಕಾರು ಖರೀದಿಸಲು ಮಣಿಕಂಠ ಅವರ ಸಿವಿಲ್ ಸ್ಕೋರ್ ಗೆ ಲೋನ್ ಕೊಡುವುದಕ್ಕಾಗುವುದಿಲ್ಲ ಎಂದಾಗ ಸಿದ್ದೇಶ್ ಅವರು ತಮ್ಮ ದಾಖಲಾತಿ ನೀಡಿ ಅವರ ಹೆಸರಿನಲ್ಲಿ ಕಾರಿನ ಸಾಲ ಕೊಡಿಸಿರುತ್ತಾರೆ. ಅದು ಅಲ್ಲದೆ ಬೇರೆ ಬೇರೆ ಖಾಸಗಿ ವ್ಯಕ್ತಿಗಳಿಂದಲೂ ಸಿದ್ದೇಶ್ ಅವರು ತಮ್ಮ ಚೆಕ್ ನೀಡಿ ಮಣಿಕಂಠನಿಗೆ ಎರಡು ಲಕ್ಷ ಕೈ ಸಾಲವನ್ನು ಕೊಡಿಸಿರುತ್ತಾರೆ ಆದರೆ ಸಾಲ ಪಡೆದ ಸ್ನೇಹಿತ ಮಣಿಕಂಠ ಕಾರಿನ ಸಾಲದ ಕಂತು ಕಟ್ಟದೆ ಖಾಸಗಿಯವರ ಸಾಲವನ್ನು ತೀರಿಸದೆ ಮಿತ್ರ ದ್ರೋಹ ಮಾಡಿದ ಕಾರಣ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳು ಸಿದ್ದೇಶ್ ಅವರ ಮೇಲೆ ಸಾಲ ಕಟ್ಟುವಂತೆ ಒತ್ತಡ ಹೇರಿ ಮಾನಸಿಕ ಹಿಂಸೆ ನೀಡುತ್ತಿದ್ದ ಹಿನ್ನೆಲೆ ಸಿದ್ದೇಶ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ತನ್ನ ಸೆಲ್ಫಿ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಮೋಹನ್

error: Content is protected !!