ಮಂಗಳೂರು: ಹಿಂದುತ್ವ ಬೆಂಬಲಿಗ ಪುನೀತ್ ಕೆರೆಹಳ್ಳಿ ಅವರ ವಿರುದ್ದ ಕೋಮು ಪ್ರಚೋದನೆಗೆ ಸಂಬಂಧಿಸಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂನ್ 3ರ ರಾತ್ರಿ 8 ಗಂಟೆಯ ಸುಮಾರಿಗೆ ಉರ್ವ ಠಾಣೆಯಲ್ಲಿ ಸೋಶಿಯಲ್ ಮೀಡಿಯಾ ಮೇಲ್ವಿಚಾರಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಫೇಸ್‌ಬುಕ್ ವೀಕ್ಷಣೆ ನಡೆಸುತ್ತಿದ್ದ ವೇಳೆ ಪುನೀತ್ ಕೆರೆಹಳ್ಳಿ ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಒಂದು ರೀಲ್ಸ್ ಗಮನಕ್ಕೆ ಬಂದಿದೆ. ಅಲ್ಲಿ ಅವರು ನೀಡಿರುವ ಹೇಳಿಕೆಗಳು ಕೋಮು ಹಿನ್ನಲೆ ಹೊಂದಿದ್ದು, ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುವ ರೀತಿಯಲ್ಲಿವೆ ಎಂಬ ಕಾರಣದಿಂದ ಪೊಲೀಸರು ದೂರು ದಾಖಲಿಸಿದ್ದಾರೆ.

ದೂರು ಪ್ರಕಾರ, ಪುನೀತ್ ಕೆರೆಹಳ್ಳಿ ಅವರು ಬೆಂಗಳೂರಿನ ಇಸ್ಲಾಂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳನ್ನು ಉಲ್ಲೇಖಿಸಿ, ಅಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ಅವರ ಹೇಳಿಕೆಯಲ್ಲಿ — “ಅವು ಮಿನಿ ಪಾಕಿಸ್ತಾನಗಳಾಗಿವೆ”, “ಅಲ್ಲಿಗೆ ಹೋಗಿ ಬರುವ ಪರಿಸ್ಥಿತಿಯೇ ಇಲ್ಲ”, “ಅವರು ಎಲ್ಲ ರೀತಿಯ ಕಾನೂನುಬಾಹಿರ ಕೆಲಸಗಳಲ್ಲಿ ತೊಡಗುತ್ತಾರೆ, ನಾವು ನಿಚ್ಚಳನಾಗಿ ನೋಡುತ್ತೇವೆ” ಎಂಬಂತ ಮಾತುಗಳು ಸ್ಥಾನ ಪಡೆದಿವೆ.

ಈ ರೀತಿಯ ಹೇಳಿಕೆಗಳು ಎರಡು ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗುವ ಸಂಭವವಿದ್ದು, ಶಾಂತಿ ಸುವ್ಯವಸ್ಥೆಗೆ ಗಂಬೀರ ಬೆದರಿಕೆ ಉಂಟುಮಾಡಬಹುದು ಎಂಬ ಅಂಶವನ್ನು ದೂರು ಸ್ಪಷ್ಟಪಡಿಸಿದೆ.

ಪ್ರಸ್ತುತ ಉರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕೋಮು ತೀವ್ರತೆಯನ್ನು ಪ್ರಚೋದಿಸುವ ಪ್ರಯತ್ನಗಳ ವಿರುದ್ಧ ಪೊಲೀಸ್ ಇಲಾಖೆ ಗಂಭೀರವಾಗಿ ನಿಗಾವಹಿಸುತ್ತಿರುವಂತಾಗಿದ್ದು, ಈ ಪ್ರಕರಣ ಕೂಡ ಹೆಚ್ಚಿದ ಎಚ್ಚರಿಕೆಗೆ ಕಾರಣವಾಗಿದೆ.

Related News

error: Content is protected !!