
ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದೀತೀರ ಮತ್ತೊಮ್ಮೆ ರಕ್ತಸಿಕ್ತವಾಗಿದ್ದು, ಹಂತಕ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಬಂದಿದೆ. ಈ ಹತ್ಯೆ ಸಂಬಂಧ ಬಾಗಪ್ಪನ ಪುತ್ರಿ ಗಂಗೂಬಾಯಿ, ಪಿಂಟು ಅಲಿಯಾಸ್ ಪ್ರಕಾಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.
ಪಿಂಟು ವಾಟ್ಸಪ್ ಸ್ಟೇಟಸ್: ಕೊಲೆಗೆ ಕನ್ನಡಿ?
ಬಾಗಪ್ಪ ಹತ್ಯೆಯಾದ ಕೆಲವೇ ಸಮಯದ ನಂತರ, ಪಿಂಟು ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ “ಅಣ್ಣ, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆಯುತ್ತಿದ್ದ. ಈ ಸ್ಟೇಟಸ್ ಅನುಮಾನಕ್ಕೆ ಎಡೆಮಾಡಿಕೊಡಿದ್ದು, ಇದರಿಂದಲೇ ಪಿಂಟುವಿನ ವಿರುದ್ಧ ಗಂಭೀರ ಆರೋಪಗಳು ಹೊರಡಲು ಕಾರಣವಾಯಿತು.
ಬಾಗಪ್ಪ – ವಕೀಲ ರವಿ – ಪಿಂಟು: ಸೇಡು ತೀರಿಸುವ ಕುತಂತ್ರ?
ಪಿಂಟು ಅಗರಖೇಡ ಬೇರೆ ಯಾರೂ ಅಲ್ಲ, ಕಳೆದ ವರ್ಷ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ವಕೀಲ ರವಿ ಅಗರಖೇಡ್ನ ಸಹೋದರ.
ರವಿ ಅಗರಖೇಡ್ ಮತ್ತು ಬಾಗಪ್ಪ ಹರಿಜನ್ ದೂರದ ಸಂಬಂಧಿಕರು ಎಂದು ಹೇಳಲಾಗಿದ್ದು, ಕಳೆದ ವರ್ಷ ವಿಜಯಪುರದಲ್ಲಿ ನಡೆದ ರವಿ ಅವರ ಭೀಕರ ಅಪಘಾತದ ಬಳಿಕ ಪಿಂಟು, ಬಾಗಪ್ಪನ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಕೀಲ ರವಿ ಅಪಘಾತ:
ವಿಜಯಪುರ ಕೋರ್ಟ್ನಿಂದ ವಾಪಸ್ಸಾಗುವ ವೇಳೆ ರವಿ ಸ್ಕೂಟಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು, ಅವರನ್ನು ಸುಮಾರು 2 ಕಿ.ಮೀ.ವರೆಗೆ ಎಳೆದುಕೊಂಡು ಹೋದ ಭೀಕರ ಘಟನೆ ನಡೆದಿತ್ತು.
ಈ ಘಟನೆ ಪಿಂಟುವಿಗೆ ಶಾಕ್ ನೀಡಿತ್ತು, ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಹೋದರನ ಹತ್ಯೆಗೆ ನ್ಯಾಯ ಬೇಕು ಎಂದು ಪಿಂಟು ಆಗಾಗ್ ಹೇಳುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಹತ್ಯೆ ಪ್ರಕರಣ ತೀವ್ರ ತನಿಖೆ:
ಬಾಗಪ್ಪನ ಮಗಳು ಗಂಗೂಬಾಯಿ, ಪಿಂಟು ಮೇಲೆ ನೇರವಾಗಿ ಹತ್ಯೆ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ. ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಾಟ್ಸಪ್ ಸ್ಟೇಟಸ್ ಮತ್ತು ಹತ್ಯೆಗೆ ಸಂಬಂಧಿಸಿದ ಪತ್ತೆದಾರಿ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಹತ್ಯೆ ಪ್ರಕರಣದ ಸತ್ಯ ಹೊರಬರುವ ತನಕ ಭೀಮಾ ತೀರದ ಜನತೆ ಆತಂಕದಲ್ಲಿ ಮುಳುಗಿದ್ದಾರೆ. ಪಿಂಟು ನಿಜವಾಗಲೂ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದನೇ? ಅಥವಾ ಇದು ಕೇವಲ ಅನುಮಾನವೇ? ಈ ವಿಷಯದಲ್ಲಿ ಮತ್ತಷ್ಟು ಬೆಳವಣಿಗೆಗಳಿಗಾಗಿ ಕಾದು ನೋಡಬೇಕಾಗಿದೆ.