ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನ ಕೆಸ್ತೂರಿನಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಕುರಿತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ವಿವರ:
ಮಾಚಳ್ಳಿ ಗ್ರಾಮದ ನಿವಾಸಿ ದಿವ್ಯ ಎಂ.ಜೆ. (28) ಎಂಬವರು ನಿನ್ನೆ ರಾತ್ರಿ ಜಿಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದಿವ್ಯ 2016ರಲ್ಲಿ ಕೆಸ್ತೂರಿನ ಗಿರೀಶ್ ಅವರ ಜೊತೆ ವಿವಾಹವಾಗಿದ್ದರು. ದಂಪತಿ ಜಿಮ್‌ ವ್ಯವಹಾರ ನಡೆಸುತ್ತಿದ್ದು, ಸ್ಥಳೀಯರಿಗೆ ಫಿಟ್ನೆಸ್ ತರಬೇತಿ ನೀಡುತ್ತಿದ್ದರು.

ಅನುಮಾನಾಸ್ಪದ ಸಾವು:
ಇತ್ತೀಚೆಗೆ ಗಿರೀಶ್ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಕಾರಣಕ್ಕೆ ದಿವ್ಯ ಮತ್ತು ಗಿರೀಶ್ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಸಂಬಂಧ ಮೂರು ತಿಂಗಳ ಹಿಂದೆ ಗ್ರಾಮ ಪಂಚಾಯ್ತಿ ಮದ್ಯಸ್ಥತೆ ನಡೆಸಿದ್ದರೂ, ಬಳಿಕ ದಂಪತಿ ಸಾಮಾನ್ಯ ಜೀವನ ನಡೆಸುತ್ತಿದ್ದರು. ಆದರೆ ದಿವ್ಯ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದರಿಂದ ಕುಟುಂಬಸ್ಥರು ಗಿರೀಶ್ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದಾರೆ.

ಕುಟುಂಬದ ಆರೋಪ:
ದಿವ್ಯ ಅವರ ಕುಟುಂಬದ ಸದಸ್ಯರು, “ಇದು ಆತ್ಮಹತ್ಯೆ ಅಲ್ಲ, ಗಿರೀಶ್ ಅವರೇ ದಿವ್ಯ ಅವರನ್ನು ಕೊಂದು, ಇದನ್ನು ಆತ್ಮಹತ್ಯೆಯಂತೆ ತೋರುವ ಪ್ರಯತ್ನ ಮಾಡಿದ್ದಾರೆ” ಎಂದು ಆರೋಪಿಸುತ್ತಿದ್ದಾರೆ. ಈ ಕುರಿತು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚಲು ದಿವ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಮುಂದುವರಿದಿದೆ.

error: Content is protected !!