ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಬುಕ್ಕಾಪಟ್ಟಣ ಸಮೀಪ ಅಕ್ರಮವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಭರ್ತಿ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಶನಿವಾರ ತಡರಾತ್ರಿ ಪಿಎಸ್‌ಐ ಚೇತನ್‌ ಕುಮಾರ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ, 137 ಸಿಲಿಂಡರ್‌ಗಳು, ಒಂದು ಟಾಟಾ ಇಂಟ್ರಾ ಗೂಡ್ಸ್ ವಾಹನ ಹಾಗೂ ಆಕ್ಟೀವಾ ಬೈಕ್ ಸಹಿತ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಕೋಳಿ ಶೆಡ್‌ನಲ್ಲಿ ಅಕ್ರಮ ಸಿಲಿಂಡರ್ ಭರ್ತಿ

ಬುಕ್ಕಾಪಟ್ಟಣ ಸರ್ವೆ ನಂ.98 ರಲ್ಲಿರುವ ಫಾತಿಮಾ ಬಿನ್ ಸೈಯದ್ ಜಮೀಲ್ ಬಾಷ ಅವರ ಮಾಲೀಕತ್ವದ ಕೋಳಿ ಫಾರಂ ಶೆಡ್‌ನಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ, ಸರ್ಕಾರದ ಉಜ್ವಲ ಯೋಜನೆಯಡಿ ಬಡವರಿಗೆ ನೀಡುವ 75 ಗೃಹಬಳಕೆಯ ಸಿಲಿಂಡರ್‌ಗಳು ಹಾಗೂ 62 ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳು ಸಿಕ್ಕಿವೆ.

ಆರೋಪಿ ಬಂಧನ, ಇನ್ನಿಬ್ಬರು ಪರಾರಿ

ಪೊಲೀಸರು ರಘು ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇನ್ನಿಬ್ಬರು ಆರೋಪಿಗಳು ಪೊಲೀಸರು ದಾಳಿ ನಡೆಸುವ ವೇಳೆಗೆ ಪರಾರಿಯಾಗಿದ್ದಾರೆ.

ಪೊಲೀಸರ ಕಾರ್ಯಾಚರಣೆಗೆ ಡಿವೈಎಸ್ಪಿ ಭೇಟಿ

ಈ ದಾಳಿಯ ವೇಳೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್, ಸಿಪಿಐ ಅನಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆಯಲ್ಲಿ ಎಎಸ್‌ಐ ಗಂಗಾಧರಪ್ಪ, ಪೇದೆಗಳಾದ ದೊಡ್ಡಲಿಂಗಯ್ಯ, ಮೋಹನ್, ದಯಾನಂದ್, ರಾಮಚಂದ್ರ, ನವೀನ್, ಸಿದ್ದರಾಮು ಹಾಗೂ ಇತರ ಪೊಲೀಸರು ಭಾಗಿಯಾಗಿದ್ದರು.

ಈ ಪ್ರಕರಣದ ಬಗ್ಗೆ ಕೊರಟಗೆರೆ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.

Related News

error: Content is protected !!