
ಹೊಸಪೇಟೆ: ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಮಾಡಿಕೊಡುತ್ತೇವೆ ಎಂದು ನಂಬಿಸಿ, ನೂರಾರು ಜನರಿಂದ ₹100 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮುಖ್ಯ ಆರೋಪಿ ಮುಮ್ತಾಜ್ ಬೇಗಂ ಮತ್ತು ಅವರ ತಂಡ ಜನರನ್ನು ಮರುಳುಗೊಳಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಲಾಭದ ಆಮಿಷಕ್ಕೆ ನಂಬಿಕೊಂಡ ಜನ ಸಾಲ ತೆಗೆದುಕೊಂಡು, ಮನೆ ಮಾರಿ ದೊಡ್ಡ ಮೊತ್ತ ಹೂಡಿದ್ದರು. ಆದರೆ ಇದೀಗ ಹಣ ವಾಪಸು ಸಿಗದೇ, ವಂಚನೆಯ ಬಲಿಯಾಗಿ ಸಂಕಟದಲ್ಲಿದ್ದಾರೆ.
ಹೂಡಿಕೆದಾರರಲ್ಲಿ ಒಬ್ಬರಾದ ಹೊಸಪೇಟೆ ನಿವಾಸಿ ಅನೀಸ್, ತಾವು ₹1 ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿದ್ದೇವೆ ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ವಂಚನೆ ಪ್ರಕರಣದಲ್ಲಿ ಕೇರಳ ಮೂಲದ ಇಬ್ಬರು ಆರೋಪಿಗಳು ಈಗಾಗಲೇ ಬಂಧನಕ್ಕೊಳಗಾಗಿದ್ದಾರೆ, ಆದರೆ ಪ್ರಮುಖ ಆರೋಪಿ ಮುಮ್ತಾಜ್ ಬೇಗಂ ಸೇರಿದಂತೆ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಘಟನೆ ಜನರಿಗೆ ಎಚ್ಚರವಾಗುವಂತೆ ಮಾಡಿದ್ದು, ಸುಲಭ ಲಾಭದ ಆಸೆಗೆ ಬಿದ್ದು ಹಣ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ನಡೆಯುವಂತೆ ಪರಿಣಿತರ ಸಲಹೆ ನೀಡಿದ್ದಾರೆ.