ತುಮಕೂರು: ಅರಣ್ಯ ಇಲಾಖೆಯಿಂದ ಮಂಜೂರಾದ ಕಾಮಗಾರಿಗೆ ಸಂಬಂಧಿಸಿದಂತೆ ಕಾಂಟ್ರಾಕ್ಟರ್‌ನಿಂದ ₹2.60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಹಣ ಸ್ವೀಕರಿಸುತ್ತಿದ್ದ ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್‌ಚಂದ್ರ ಕೆ.ಎಸ್. ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗುಬ್ಬಿ ಅರಣ್ಯ ವಲಯದಲ್ಲಿ ಸಿಸಿಟಿ ಅಗೆಯುವಿಕೆ ಹಾಗೂ ಬದುಗಳ ಮೇಲೆ ಗಿಡ ನೆಡುವ ಕಾಮಗಾರಿಯನ್ನು ಕೈಗೊಳ್ಳಲು ಅರಣ್ಯ ಮತ್ತು ಸಿವಿಲ್ ಕಾಂಟ್ರಾಕ್ಟರ್ ಬಿ.ಜೆ. ಶಿವರಾಜು ಅವರಿಗೆ 2026ರ ಜುಲೈ 13ರಂದು ಕಾರ್ಯಾದೇಶ ನೀಡಲಾಗಿತ್ತು. ಕಾಮಗಾರಿ ಆರಂಭಿಸಿದ ಬಳಿಕ ಅರಣ್ಯಾಧಿಕಾರಿ ಸತೀಶ್‌ಚಂದ್ರ ಅವರು ಲಂಚ ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.

ಅದರಂತೆ ಮೊದಲ ಕಂತಾಗಿ ₹50,000 ಹಣವನ್ನು ತಮ್ಮ ಸರ್ಕಾರಿ ವಸತಿ ಗೃಹದಲ್ಲಿ ಬಲವಂತವಾಗಿ ಪಡೆದುಕೊಂಡಿದ್ದಲ್ಲದೆ, ಉಳಿದ ಹಣವನ್ನೂ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲೋಕಾಯುಕ್ತರಿಗೆ ದೂರು

ಲಂಚ ನೀಡಲು ಇಚ್ಛಿಸದ ಕಾಂಟ್ರಾಕ್ಟರ್ ಶಿವರಾಜು ಅವರು ಸೆಪ್ಟೆಂಬರ್ 11ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು.

₹2 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಕ್ಯಾಂಪ್ ವಾಚರ್

ಶುಕ್ರವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ, ಅರಣ್ಯಾಧಿಕಾರಿ ಸತೀಶ್‌ಚಂದ್ರ ಅವರ ಸೂಚನೆಯಂತೆ ಅವರ ಕಚೇರಿಯ ಹೊರಗುತ್ತಿಗೆ ನೌಕರ ಹಾಗೂ ಕ್ಯಾಂಪ್ ವಾಚರ್ ಶೋಖಿತ್ ಎಂಬವರು ದೂರುದಾರರಿಂದ ₹2 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ವೇಳೆ ಶೋಖಿತ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಅರಣ್ಯಾಧಿಕಾರಿ ಸತೀಶ್‌ಚಂದ್ರ ಅವರ ಪಾತ್ರದ ಬಗ್ಗೆಯೂ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಡಾ. ಸಂತೋಷ್ ಕೆ.ಎಂ. ಹಾಗೂ ಮಂಜುನಾಥ್ ಎಂ. ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಶಾಂತನಾಥ ಜಿ. ವನ್ನೂರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಲಂಚದ ಬೇಡಿಕೆ, ಹಣ ಸ್ವೀಕಾರ ಹಾಗೂ ಅಧಿಕಾರಿಯ ಪಾತ್ರದ ಕುರಿತು ಲೋಕಾಯುಕ್ತ ಪೊಲೀಸರು ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

Related News

error: Content is protected !!