ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ ಸಹಾಯ ಕೋರಿದ್ದಾನೆ. ಆದರೆ ಸ್ನೇಹಿತ ಸಮಯಪ್ರಜ್ಞೆ ಮೆರೆದು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ಆರೋಪಿಯನ್ನು ಬಂಧಿಸಲಾಗಿದೆ.

ಬಂಧಿತನನ್ನು 24 ವರ್ಷದ ಅನುರಾಂಗ್ ಎಂದು ಗುರುತಿಸಲಾಗಿದ್ದು, ಆತ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. 2023ರಲ್ಲಿ 20 ವರ್ಷದ ಕನಿಕಾ ಅವರನ್ನು ವಿವಾಹವಾಗಿದ್ದ ಅನುರಾಂಗ್, ಪತ್ನಿ ಬೇರೆ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಶನಿವಾರ ರಾತ್ರಿ ಅನುರಾಂಗ್ ತನ್ನ ಕ್ಯಾಬ್ ಚಾಲಕ ಸ್ನೇಹಿತನಿಗೆ ಕರೆ ಮಾಡಿ ತುರ್ತು ಕೆಲಸವಿದೆ ಎಂದು ಮನೆಗೆ ಬರಲು ಹೇಳಿದ್ದನು. ರಾತ್ರಿ ಸುಮಾರು 9:45ರ ವೇಳೆಗೆ ಸ್ನೇಹಿತ ಮನೆಗೆ ಬಂದಾಗ, “ನನ್ನ ಹೆಂಡತಿ ಬೇರೆಯವರ ಜೊತೆ ಮಾತನಾಡುತ್ತಿದ್ದಳು. ಕೋಪದಲ್ಲಿ ಅವಳನ್ನು ಹೊಡೆದು ಕೊಂದಿದ್ದೇನೆ,” ಎಂದು ಹೇಳಿ ಮೂರನೇ ಮಹಡಿಯ ಕೊಠಡಿಯಲ್ಲಿ ಮಂಚದ ಮೇಲೆ ಬಿದ್ದಿದ್ದ ಕನಿಕಾ ಅವರ ಮೃತದೇಹವನ್ನು ತೋರಿಸಿದ್ದಾನೆ.

ಇದಾದ ಬಳಿಕ ಶವವನ್ನು ಯಾರಿಗೂ ಗೊತ್ತಾಗದಂತೆ ಎಸೆಯಲು ಸಹಾಯ ಮಾಡುವಂತೆ ಸ್ನೇಹಿತನನ್ನು ಒತ್ತಾಯಿಸಿದ್ದಾನೆ. ತನ್ನ ಮೊಬೈಲ್ ಹ್ಯಾಂಗ್ ಆಗಿದೆ ಎಂದು ಹೇಳಿ ಸ್ನೇಹಿತನ ಫೋನ್ ಪಡೆದುಕೊಂಡು ಅದನ್ನೂ ತನ್ನ ಬಳಿಯೇ ಇಟ್ಟುಕೊಂಡಿದ್ದನು. ನಂತರ ಇಬ್ಬರೂ ಜೆಎನ್‌ಯು ರಸ್ತೆ ಹಾಗೂ ಸಂಜಯ್ ವನ್ ಪ್ರದೇಶಗಳಲ್ಲಿ ಶವವನ್ನು ಎಸೆಯಲು ಸೂಕ್ತ ಸ್ಥಳ ಹುಡುಕುತ್ತಾ ಸುತ್ತಾಡಿದ್ದಾರೆ.

ಆದರೆ ಈ ಕೃತ್ಯದಲ್ಲಿ ಭಾಗಿಯಾಗಲು ಮನಸ್ಸಿಲ್ಲದ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡುವ ಯೋಚನೆಯಲ್ಲಿದ್ದ. ಕೊನೆಗೆ ತನ್ನ ಮನೆಗೆ ಹೋಗೋಣ ಎಂದು ಅನುರಾಂಗ್‌ನನ್ನು ಒಪ್ಪಿಸಿ, ಮನೆ ತಲುಪಿದ ಬಳಿಕ “ಅಮ್ಮನನ್ನು ಕರೆದು ಗೇಟ್ ತೆರೆಯಿಸಬೇಕು” ಎಂಬ ನೆಪದಲ್ಲಿ ತನ್ನ ಮೊಬೈಲ್ ವಾಪಸ್ ಪಡೆದಿದ್ದಾನೆ. ಕೂಡಲೇ ಮನೆಯ ಮೇಲ್ಭಾಗಕ್ಕೆ ತೆರಳಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದಾನೆ.

ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ಸ್ನೇಹಿತನ ಸನ್ನೆಯ ಆಧಾರದಲ್ಲಿ ಅನುರಾಂಗ್‌ನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಮನೆ ಪರಿಶೀಲಿಸಿದಾಗ ಕನಿಕಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಸಫ್‌ದರ್‌ಜಂಗ್ ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ದೃಢಪಡಿಸಿದರು.

ಘಟನಾ ಸ್ಥಳದಿಂದ ಮೊಳೆಗಳಿದ್ದ ಮುರಿದ ಮರದ ತುಂಡು ಹಾಗೂ ಟೇಬಲ್ ಸ್ಟ್ಯಾಂಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳಿಂದಲೇ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ನೇಹಿತನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.

Related News

error: Content is protected !!