ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದ್ದು, 52 ವರ್ಷದ ಕಾಲೇಜು ಕ್ಲರ್ಕ್ ಹಾಗೂ ಜಿಮ್ ಮಾಲೀಕರೊಬ್ಬರು ಆತ್ಮಹತ್ಯೆಗೂ ಮುನ್ನ ವಾಟ್ಸಾಪ್‌ನಲ್ಲಿ ಭಾವನಾತ್ಮಕ ಸಂದೇಶ ಕಳುಹಿಸಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಅವರ ಕೊನೆಯ ಸಂದೇಶ ಇದೀಗ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ.

ಮೃತರನ್ನು ಸಹಾರನ್‌ಪುರದ ಸರಸಾವಾ ನಿವಾಸಿ ದೇವದತ್ ಶರ್ಮಾ (52) ಎಂದು ಗುರುತಿಸಲಾಗಿದೆ. ಅವರು ಸ್ಥಳೀಯ ಬಾಲಾಜಿ ಗ್ರೂಪ್ ಆಫ್ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ 26 ವರ್ಷಗಳಿಂದ ತಮ್ಮ ಮನೆಯ ಹಿಂಭಾಗದಲ್ಲೇ ‘ರಾಕ್ ಜಿಮ್’ ಅನ್ನು ನಡೆಸುತ್ತಿದ್ದರು.

ಶನಿವಾರ ಸಂಜೆ ಕಾಲೇಜು ಮತ್ತು ಜಿಮ್ ಕೆಲಸ ಮುಗಿಸಿ ಮನೆಗೆ ಬಂದ ದೇವದತ್ ಶರ್ಮಾ, ಮನೆಯಲ್ಲೇ ತಮ್ಮ ಬಳಿ ಇದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಆತ್ಮಹತ್ಯೆಗೂ ಕೆಲವೇ ಕ್ಷಣಗಳ ಮೊದಲು ತಮ್ಮ 21 ವರ್ಷದ ಸೊಸೆ ನೆಹಾ ಶರ್ಮಾಗೆ ದೇವದತ್ ಶರ್ಮಾ ವಾಟ್ಸಾಪ್‌ನಲ್ಲಿ ಸುದೀರ್ಘ ಸಂದೇಶ ಕಳುಹಿಸಿದ್ದರು. ಅದರಲ್ಲಿ, ತಾವು ನಿರಂತರ ಅವಮಾನ ಅನುಭವಿಸುತ್ತಿದ್ದು, ಇನ್ನು ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಸಂದೇಶದಲ್ಲಿ, “ಪ್ರತಿದಿನ ಅವಮಾನ ಅನುಭವಿಸಿ ಬದುಕುವುದಕ್ಕಿಂತ ಒಮ್ಮೆಲೇ ಸಾಯುವುದು ಉತ್ತಮ. ನಾನು ಹೇಡಿಯಲ್ಲ. ಆದರೆ ಈ ಮಾನಸಿಕ ನೋವು ನನ್ನನ್ನು ಒಳಗಿನಿಂದಲೇ ಕೊಂದಿದೆ. ನನ್ನ ಹೆಂಡತಿ ನನ್ನ ಶವವನ್ನು ಮುಟ್ಟಬಾರದು. ನನ್ನ ಅಂತ್ಯಕ್ರಿಯೆಗೆ ಅನಗತ್ಯ ಖರ್ಚು ಮಾಡಬೇಡಿ, ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನೂ ನಡೆಸಬೇಡಿ” ಎಂದು ತಮ್ಮ ಕೊನೆಯ ಇಚ್ಛೆಗಳನ್ನು ದಾಖಲಿಸಿದ್ದರು.

ದೇವದತ್ ಶರ್ಮಾ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಹಿರಿಯ ಪುತ್ರ ದುಬೈನಲ್ಲಿ ಉದ್ಯೋಗದಲ್ಲಿದ್ದು, ಕಿರಿಯ ಪುತ್ರ ಚಂಡೀಗಢದಲ್ಲಿ ಫೊರೆನ್ಸಿಕ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಫೊರೆನ್ಸಿಕ್ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಾಟ್ಸಾಪ್ ಸಂದೇಶದ ಆಧಾರದ ಮೇಲೆ ಕುಟುಂಬಸ್ಥರು, ಬಂಧುಗಳು ಹಾಗೂ ನೆರೆಹೊರೆಯವರನ್ನು ವಿಚಾರಣೆ ನಡೆಸಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.

Related News

error: Content is protected !!