ಮೊದಲೇ ಪ್ರೀತಿಸಿ ಮದುವೆಯಾಗಿ ಸುಖವಾಗಿ ಜೀವನ ಆರಂಭಿಸಿದ್ದ ದಂಪತಿಯ ನಡುವೆ ಬೆಳೆದ ಕೌಟುಂಬಿಕ ಕಲಹ ಮತ್ತು ಅನುಮಾನ ಕೊನೆಗೆ ಇಬ್ಬರು ಮುಗ್ಧ ಮಕ್ಕಳ ಬದುಕನ್ನೇ ನಾಶಗೊಳಿಸಿದ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ತನ್ನೊಂದಿಗೆ ಮತ್ತೆ ಸಂಸಾರಕ್ಕೆ ಬರಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ತಂದೆಯೊಬ್ಬ ಇಬ್ಬರು ಮಕ್ಕಳಿಗೆ ತಂಪು ಪಾನೀಯದಲ್ಲಿ ಇಲಿ ವಿಷ ಬೆರೆಸಿ ಕುಡಿಸಿ, ಬಳಿಕ ತಾನೂ ಅದನ್ನೇ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆಗೆ 10 ವರ್ಷದ ಬಾಲಕಿ ಬಲಿಯಾಗಿದ್ದು, 8 ವರ್ಷದ ಬಾಲಕ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾನೆ.

ಪ್ರವಳಿಕ ಮತ್ತು ವಿಜಯಕುಮಾರ್ ಸುಮಾರು 12 ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ 10 ವರ್ಷದ ಪುತ್ರಿ ಆದ್ಯಾ ಹಾಗೂ 8 ವರ್ಷದ ಪುತ್ರ ಸುಪ್ರೀತ್ ಇದ್ದಾರೆ. ಆದರೆ ಯಾವುದೇ ಉದ್ಯೋಗ ಮಾಡದ ವಿಜಯಕುಮಾರ್ ಪತ್ನಿಯ ನಡವಳಿಕೆಯ ಬಗ್ಗೆ ನಿರಂತರ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಈ ಕಿರುಕುಳದಿಂದ ಬೇಸತ್ತ ಪ್ರವಳಿಕ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೌನ್ಸೆಲಿಂಗ್ ನಡೆದರೂ ಪರಿಸ್ಥಿತಿ ಸುಧಾರಿಸದ ಕಾರಣ, ಕಳೆದ ಮೂರು ತಿಂಗಳಿಂದ ಅವರು ಒಂಗೋಲ್‌ನ ಸ್ತ್ರೀಶಕ್ತಿ ಸದನದಲ್ಲಿ ಆಶ್ರಯ ಪಡೆದಿದ್ದರು.

ಮಕ್ಕಳನ್ನು ನವೋದಯ ಶಾಲೆಗೆ ಸೇರಿಸುವ ವಿಚಾರವಾಗಿ ಜುಲೈ 18ರಂದು ಪ್ರವಳಿಕ ಪತಿಯನ್ನು ಸಂಪರ್ಕಿಸಿದ್ದರು. ಮಕ್ಕಳಿಗೆ ಪುಸ್ತಕಗಳನ್ನು ನೀಡಿದ ವಿಜಯಕುಮಾರ್ ಮತ್ತೊಮ್ಮೆ ಪತ್ನಿಯನ್ನು ಮನೆಗೆ ಮರಳುವಂತೆ ಮನವಿ ಮಾಡಿದ್ದಾನೆ. ಆದರೆ ಪ್ರವಳಿಕ ಅದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶಗೊಂಡ ವಿಜಯಕುಮಾರ್, ಮರುದಿನ ಇಬ್ಬರು ಮಕ್ಕಳಿಗೂ ಕೂಲ್ ಡ್ರಿಂಕ್‌ನಲ್ಲಿ ಇಲಿ ವಿಷ ಬೆರೆಸಿ ಕುಡಿಸಿ, ತಾನೂ ಅದನ್ನೇ ಸೇವಿಸಿದ್ದಾನೆ. ಬಳಿಕ ಅಸ್ವಸ್ಥಗೊಂಡ ಮಕ್ಕಳನ್ನು ಸ್ತ್ರೀಶಕ್ತಿ ಸದನದಲ್ಲಿದ್ದ ತಾಯಿಯ ಬಳಿ ಬಿಟ್ಟು ತೆರಳಿದ್ದಾನೆ.

ಮಕ್ಕಳ ಆರೋಗ್ಯ ಹದಗೆಟ್ಟಿರುವುದನ್ನು ಗಮನಿಸಿದ ಪ್ರವಳಿಕ ತಕ್ಷಣವೇ ಅವರನ್ನು ಒಂಗೋಲ್‌ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಎಗ್ಮೋರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 10 ವರ್ಷದ ಆದ್ಯಾ ಮೃತಪಟ್ಟಿದ್ದಾಳೆ. ಪುತ್ರ ಸುಪ್ರೀತ್‌ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

ಇತ್ತ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ವಿಜಯಕುಮಾರ್ ಒಂಗೋಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಗಳ ಸಾವಿನ ಬಳಿಕ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿಜಯಕುಮಾರ್ ವಿರುದ್ಧ ಕೊಲೆ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಆಸ್ಪತ್ರೆಯಲ್ಲೇ ಆತನ ಹೇಳಿಕೆಯನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!