ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಸಾಲದ ಒತ್ತಡದಿಂದ ಒಂದೇ ಕುಟುಂಬದಲ್ಲಿ ನಡೆದ ಭೀಕರ ಘಟನೆ ಇಬ್ಬರ ಜೀವ ತೆಗೆದುಕೊಂಡಿದೆ. ತಾಯಿ ಹಾಗೂ ಅಕ್ಕನನ್ನು ಕೊಂದು, ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಘಟನೆಯಲ್ಲಿ ತಾಯಿ ಆಶಾ (55) ಮತ್ತು ಅಕ್ಕ ವರ್ಷಿತಾ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೋಹನ್ ಗೌಡ (27) ಮತ್ತು ವರ್ಷಿತಾ ಮಗ ಮಯಾಂಕ್ (11) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ವಿವರ:
ಸಾಲಗಾರರ ಕಾಟದಿಂದ ಮನೋವ್ಯಥೆಗೆ ಒಳಗಾಗಿದ್ದ ಮೋಹನ್ ಗೌಡ, ಆತ್ಮಹತ್ಯೆ ಮಾಡುವುದಾಗಿ ಮುನ್ನವೇ ವಿಡಿಯೋ ದಾಖಲಿಸಿ ಸಂಬಂಧಿಕರಿಗೆ ಕಳುಹಿಸಿದ್ದನು. ಇದರಿಂದ ಆತಂಕಗೊಂಡ ಸಂಬಂಧಿಕರು ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಬಳಿಕ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ತಾಯಿ ಮತ್ತು ಅಕ್ಕ ಮೃತದೇಹಗಳು ಪತ್ತೆಯಾಗಿವೆ.
ಅಲ್ಲದೆ, ಮೋಹನ್ ಮತ್ತು ಮಯಾಂಕ್ ಗಾಯಗೊಂಡ ಸ್ಥಿತಿಯಲ್ಲಿ ನೆಲದಲ್ಲಿ ಪತ್ತೆಯಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಇಬ್ಬರೂ ಜೀವಪಾಯದ ನಡುವೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ತನಿಖೆ:
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೋಹನ್ ಚೀಟಿ ವ್ಯವಹಾರದಲ್ಲಿ ಹಾಗೂ ಐಷಾರಾಮಿ ಜೀವನಕ್ಕಾಗಿ ಹೆಚ್ಚಿನ ಸಾಲ ಮಾಡಿಕೊಂಡಿದ್ದನು. ಸಾಲ ತೀರಿಸಲು ಆಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.
ಮೋಹನ್ ಮೊದಲು ತಾಯಿ, ಅಕ್ಕ ಮತ್ತು ಬಾಲಕನ ಕತ್ತು ಸೀಳಿ, ನಂತರ ತಾನು ಆತ್ಮಹತ್ಯೆಗೆ ಯತ್ನಿಸಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.
